Tuesday, January 19, 2010

ದಕ್ಷಿಣ ಭಾರತದ ಭ್ರಷ್ಟ 'ಕೋಡಾ'ಗಳು

ಶ್ರೀ ಚಂದ್ರಬಾಬು ನಾಯ್ಡುರವರ ಇತ್ತೀಚಿನ ಆರೋಪಗಳನ್ನು ಗಮನಿಸಿದಲ್ಲಿ, ವಿಶ್ವಸಂಸ್ಥೆಯ ತಂಡವು ಇರಾನ್‌ನ ಅಣುಸ್ಥಾವರಗಳ ಪರಿಶೀಲನೆಗೆ ಭೇಟಿನೀಡಲು ಅನುಮತಿ ಪಡೆಯುವುದು ಓಬಳಾಪುರಂ ಗಣಿಗಳ ಪರಿಶೀಲನೆಗೆ ಅನುಮತಿ ಪಡೆಯುವುದಕ್ಕಿಂತ ಸುಲಭವಾಗಿದೆ. ಭಾರತ ಸರ್ವೇಕ್ಷಣ ಇಲಾಖೆಯವರು ಕೇಂದ್ರ ಮೀಸಲು ಪಡೆಯವರ ರಕ್ಷಣೆಯಿಲ್ಲದೆ ಓಬಳಾಪುರಂ ಗಣಿಗಳನ್ನು ಪ್ರವೇಶಿಸಲು ಹೆದರಿಕೊಳ್ಳುತ್ತಿದ್ದಾರೆಂದು ೨೦ನೇ ನವೆಂಬರ್‌ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ನಾಯ್ಡುರವರು ತಿಳಿಸಿದ್ದಾರೆ. ಕಲ್ಲೋಳ್ ಬಿಸ್ವಾಸ್ ಎಂಬ ಅರಣ್ಯಾಧಿಕಾರಿಯನ್ನು ಓಡಿಸಿ ಹೊರಗಟ್ಟಿದ್ದಲ್ಲದೆ ಅವರ ಮೇಲೆ ಸುಳ್ಳು ಕೇಸುಗಳನ್ನು ಸಹ ದಾಖಲಿಸಿದ್ದಾರೆ. ನಾಯ್ಡುರವರ ಪ್ರಕಾರ ಇದರ ಜೊತೆಗೆ ಓಬಳಾಪುರಂ ಗಣಿಗಳ ಪರಿಶೀಲನೆ ಪ್ರಾರಂಭಿಸಬೇಕೆಂದಿದ್ದ ಐ.ಜಿ.ಪಿ. ಸುಬ್ರಹ್ಮಣ್ಯಂ ಅವರನ್ನು ಸಹ ವಿಜಿಲೆನ್ಸ್‌ನ ಉಪಮಹಾ ನಿರೀಕ್ಷಕರು ಹಿಂದಕ್ಕೆ ಕರೆಸಿಕೊಂಡಿದ್ದಾರೆ.
೨೦೦೭ರಲ್ಲಿ ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೆ ೧೦೬೭೦ ಎಕರೆ ಭೂಮಿಯನ್ನು ಎಕರೆಗೆ ೧೮೦೦೦ ರೂಗಳಂತೆ ನೀಡಲಾಯಿತು. ಅದರ ಶಂಕುಸ್ಥಾಪನೆಯನ್ನು ನೆರವೇರಿಸಿದ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರು ಆ ಕಂಪೆನಿಯು ೨೦೦೯ರ ಹೊತ್ತಿಗೆ ೧೫೦೦೦ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ೨ ದಶಲಕ್ಷ ಟನ್‌ಗಳಷ್ಟು ಉಕ್ಕನ್ನು ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ತಿಳಿಸಿದ್ದರು. ಅದೇ ದಿನ ಜನಾರ್ಧನ ರೆಡ್ಡಿ ೭.೫ ಕೋಟಿ ರೂಗಳಷ್ಟು ಮೌಲ್ಯದ ಬುಲೆಟ್ ನಿರೋಧಕ ವೋಲ್ವೋ ಬಸ್ ಒಂದನ್ನು ವೈ.ಎಸ್.ರಾಜಶೇಖರ ರೆಡ್ಡಿಯವರಿಗೆ ಕಾಣಿಕೆಯಾಗಿ ನೀಡಿದರು. ಚಂದ್ರಬಾಬು ನಾಯ್ಡುರವರ ಪ್ರಕಾರ ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೆ ಮಾತ್ರ ಕಬ್ಬಿಣದ ಅದಿರನ್ನು ಸರಬರಾಜು ಮಾಡಬೇಕೆಂಬ ಉದ್ದೇಶದಿಂದಲೇ ರೆಡ್ಡಿ ಸಹೋದರರಿಗೆ ಓಬಳಾಪುರಂ ಗಣಿಗಳನ್ನು ಮಂಜೂರು ಮಾಡಲಾಗಿತ್ತು. ಅದರ ಬದಲಿಗೆ ಬ್ರಾಹ್ಮಣಿ ಸ್ಟೀಲ್ಸ್‌ನ ಉಪಸಂಸ್ಥೆಯಾಗಿರುವ ಓಬಳಾಪುರಂ ಗಣಿಗಳು ಬ್ರಾಹ್ಮಿನಿ ಸ್ಟೀಲ್ಸ್ ಉಕ್ಕನ್ನು ತಯಾರಿಸಲು ಪ್ರಾರಂಭಿಸುವ ಮೊದಲೇ ಕಬ್ಬಿಣದ ಅದಿರನ್ನು ರಫ್ತುಮಾಡಿ ಅದರಿಂದ ಸಾಕಷ್ಟು ಲಾಭ ಗಳಿಸಿದೆ. ಅಂದರೆ ಸರ್ಕಾರದ ಅದಿರು ಅಥವಾ ಮಣ್ಣನ್ನು ತೆಗೆದುಕೊಂಡು ಅದನ್ನು ಪರದೇಶದವರಿಗೆ ಮಾರಿ ಅದರಿಂದ ಬರುವ ಲಾಭವನ್ನು ತಮ್ಮ ಖಾಸಗಿ ಸ್ಟೀಲ್ ಕೈಗಾರಿಕೆಯಲ್ಲಿ ಬಂಡವಾಳ ಹೂಡುವುದು. ಇದು ಹೇಗಿದೆಯೆಂದರೆ, ಎಂ.ಜಿ.ರಸ್ತೆಯಲ್ಲಿ ೧೦ ಎಕರೆ ಸರ್ಕಾರದ ಜಮೀನನ್ನು ಪಡೆದುಕೊಂಡು ಅದರಲ್ಲಿ ಅರ್ಧ ಜಮೀನನ್ನು ಮಾರಾಟಮಾಡಿ ಉಳಿದರ್ಧ ಸರ್ಕಾರದ ಜಮೀನನ್ನು ಬ್ಯಾಂಕ್‌ಗಳಿಗೆ ಒತ್ತೆಯಿಟ್ಟು ಅಲ್ಲಿ ಕಟ್ಟಡಗಳನ್ನು ನಿರ್ಮಿಸಿ ತಾವು ಅದರ ಬಾಡಿಗೆಯ ಲಾಭವನ್ನು ಪಡೆದುಕೊಳ್ಳುವುದು. ಎಂತಹ ಅದ್ಭುತ ವ್ಯವಹಾರ ಚತುರತೆ! ಇದೇ ಆರೋಪವನ್ನೇ ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ರೆಡ್ಡಿ ಸಹೋದರರ ಮೇಲೆ ಹೊರಿಸುತ್ತಿವೆ. ಆದರೆ ರೆಡ್ಡಿ ಸಹೋದರರ ಪ್ರಕಾರ ಓಬಳಾಪುರಂ ಗಣಿಗಳ ಭೂಮಿಯನ್ನು ಗುತ್ತಿಗೆ ನೀಡಿರುವ ಸರ್ಕಾರ ಅದರಲ್ಲಿನ ಕಬ್ಬಿಣದ ಅದಿರನ್ನು ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೇ ಕೊಡಬೇಕೆಂಬ 'ಕ್ಯಾಪ್ಟೀವ್ ಗಣಿ'ಗಳ ಶರತ್ತನ್ನು ಹಾಕಿಲ್ಲ. ಇತರರು ಹೇಳುವಂತೆ ಪರವಾನಗಿ ನೀಡುವ ಸಮಯದಲ್ಲಿ ಸರ್ಕಾರ ಬೇಕೆಂದೇ ಆ ಶರತ್ತನ್ನು ಕೈಬಿಟ್ಟಿದೆ!
ಜನಾರ್ಧನ ರೆಡ್ಡಿಯವರು ಹೇಳಿರುವಂತೆ ವರ್ಷಕ್ಕೆ ೫.೫ರಿಂದ ೬ ದಶಲಕ್ಷ ಟನ್‌ನಂತೆ ಒಟ್ಟು ೧೦೨ ದಶಲಕ್ಷ ಟನ್ ಕಬ್ಬಿಣದ ಅದಿರನ್ನು ತೆಗೆಯಲು ಆಂಧ್ರದ ಅನಂತಪುರ್ ಜಿಲ್ಲೆಯಲ್ಲಿ ಓಬಳಾಪುರಂ ಗಣಿಗಳು ಪರವಾನಗಿ ಪಡೆದಿವೆ. ಅಷ್ಟಲ್ಲದೆ ಆ ಕಂಪೆನಿಯು ಕರ್ನಾಟಕದಲ್ಲಿ ೧೬ ದಶಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ತೆಗೆಯಲು ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಿವೆ ಹಾಗೂ ಸರ್ಕಾರದಲ್ಲಿ ಈ ಪ್ರಸ್ತಾವನೆ ಮಂಜೂರಾಗುವ ಹಂತದಲ್ಲಿದೆ. ಅವರೇ ಹೇಳಿರುವಂತೆ ಓಬಳಾಪುರಂ ಗಣಿಗಳು ಕಳೆದ ವರ್ಷ ೧೩೦೦ ಕೋಟಿಗಳಷ್ಟು ಹಣ ಗಳಿಸಿದೆ ಹಾಗೂ ಅದನ್ನು ಬ್ರಾಹ್ಮಿನಿ ಸ್ಟೀಲ್ ಕಂಪೆನಿಯಲ್ಲಿ ಹೂಡಲಾಗಿದೆ. ಅವಶ್ಯಕವಿರುವ ಇನ್ನೂ ೩೦೦೦ ಕೋಟಿಗಳನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಉದ್ದೇಶಿಸಲಾಗಿದೆ. ಇಲ್ಲಿರುವ ಬಹುಮುಖ್ಯ ಪ್ರಶ್ನೆಯೆಂದರೆ, ಹೇಗೆ ನಮ್ಮ ಸರ್ಕಾರಗಳು ದೇಶದ ಖನಿಜ ಸಂಪತ್ತನ್ನು ಅಷ್ಟೊಂದು ಕಡಿಮೆ ಹಣಕ್ಕೆ ಮಾರಿಕೊಳ್ಳಬಲ್ಲವು? ಅದರ ಬದಲಿಗೆ ಸರ್ಕಾರಗಳೇ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳನ್ನು ಸ್ಥಾಪಿಸಿ ಅದರ ಲಾಭವನ್ನು ರಾಜ್ಯದ ಹಿತಕ್ಕಾಗಿ ಬಳಸಿಕೊಳ್ಳಬಹುದಾಗಿತ್ತು ಅಥವಾ ಅಂತಹ ಕಾರ್ಯಕ್ಕಾಗಿ ಜಾಗತಿಕ ಟೆಂಡರ್‌ಗಳನ್ನು ಕರೆಯಬಹುದಾಗಿತ್ತು ಅಥವಾ ಪ್ರತಿಯೊಂದು ಟನ್ ಕಬ್ಬಿಣದ ಅದಿರಿನ ಮೇಲಿನ ಲೆವಿಯನ್ನು ಹೆಚ್ಚಿಸಬಹುದಾಗಿತ್ತು. ಚಂದ್ರಬಾಬು ನಾಯ್ಡುರವರ ಆರೋಪದಂತೆ ಆಂಧ್ರ ಪ್ರದೇಶದ ಸರ್ಕಾರವು ಅನಂತ್‌ಪುರ್ ಜಿಲ್ಲೆಯೊಂದರಿಂದಲೇ ವಾರ್ಷಿಕ ೧೦೦೦೦ ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಆ ಜಮೀನನ್ನು ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೇವಲ ೯ ಕೋಟಿ ರೂಗಳಷ್ಟು ಹಣ ಮಾತ್ರ ದೊರಕುತ್ತಿದೆ. ರೆಡ್ಡಿ ಸಹೋದರರ ರೆಡ್ ಗೋಲ್ಡ್ ಕಂಪೆನಿ ಮತ್ತು ಜಗನ್‌ರವರ ಜಗತಿ ಪಬ್ಲಿಕೇಶನ್ಸ್ ನಡುವೆ ವ್ಯವಹಾರದ ಸಂಬಂಧಗಳಿವೆ ಎಂದೂ ಸಹ ನಾಯ್ಡುರವರು ಆರೋಪಿಸಿದ್ದಾರೆ. ಜಗನ್‌ರವರ ಖಾಸಗಿ ದೂರದರ್ಶನ ಚಾನೆಲ್ ಮತ್ತು ಸಾಕ್ಷಿ ವೃತ್ತ ಪತ್ರಿಕೆಗಳನ್ನು ರೆಡ್ಡಿ ಸಹೋದರರೇ ಸಾಕಿ ಸಲಹುತ್ತಿದ್ದಾರೆ. ಇದಕ್ಕುತ್ತರವಾಗಿ ಜನಾರ್ಧನ ರೆಡ್ಡಿಯವರು ಈ ಹೇಳಿಕೆಗಳೆಲ್ಲಾ ಸುಳ್ಳೆಂದೂ ಅವೇನಾದರೂ ಸಾಬೀತಾದಲ್ಲಿ ಅವರು ರಾಜಕೀಯ ಸಂನ್ಯಾಸ ಪಡೆಯುವುದಾಗಿ ಹಾಗೂ ಹೈದರಾಬಾದ್‌ನ ರಸ್ತೆಗಳಲ್ಲಿ ಶಿಕ್ಷೆ ಪಡೆಯುವುದಾಗಿ ತಿಳಿಸಿದ್ದಾರೆ.
ತಮ್ಮ ಧನಬಲದಿಂದಾಗಿ ಕರ್ನಾಟಕ ಮತ್ತು ಆಂಧ್ರದಲ್ಲಿ ಗಣಿ ಮಾಫಿಯಾ ಬಿ.ಜೆ.ಪಿ ಮತ್ತು ಕಾಂಗ್ರೆಸ್‌ಗಳನ್ನು ಅಧಿಕಾರಕ್ಕೆ ತರವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದೇಶದ ರಾಷ್ಟ್ರೀಯ ಪಕ್ಷಗಳೂ ಸಹ ಅಕ್ರಮ ಗಣಿ ಮಾಫಿಯಾಗಳಿಗೆ ಪರೋಕ್ಷ ಬೆಂಬಲ ನೀಡುತ್ತಾ ಬಂದಿವೆ. ಆಂಧ್ರದ ಕುತ್ತಿಗೆಯನ್ನು ಜಗನ್ ಹಿಡಿದಿದ್ದರೆ ರೆಡ್ಡಿ ಸಹೋದರರು ಕರ್ನಾಟಕದ ಸರ್ಕಾರದ ಕುತ್ತಿಗೆ ಹಿಚುಕಿ ಮುಖ್ಯ ಮಂತ್ರಿಗಳು ಅಸಹಾಕತೆಯಿಂದ ಸಾರ್ವಜನಿಕರೆದುರು ಕಣ್ಣೀರು ಹಾಕುವಂತೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಇಂತಹ ಮಾಫಿಯಾಗಳ ಕೈಗೆ ಸಿಲುಕುತ್ತಿರುವುದು ದುರದೃಷ್ಟಕರವಾಗಿದೆ. ಆಂಧ್ರದಲ್ಲಿ ವಿರೋಧ ಪಕ್ಷಗಳೆಲ್ಲಾ ಇವರೆದುರು ಒಗ್ಗೂಡಿದ್ದರೆ, ಕರ್ನಾಟಕದ ವಿರೋಧ ಪಕ್ಷಗಳು ಯಾವುದೇ ಆಸಕ್ತಿ ತೋರುತ್ತಿಲ್ಲ. ಇಂತಹ ಗಂಭೀರ ವಿಷಯದ ಬಗ್ಗೆ ತೀರಾ ಅನಾಸಕ್ತಿ ತೋರುತ್ತಿರುವ ಜೆ.ಡಿ.ಎಸ್.ನ ಉದ್ದೇಶದ ಬಗ್ಗೆ ಗುಮಾನಿ ಬರುತ್ತದೆ. ಆದರೆ ಅದರ ತೃತೀಯ ರಂಗದ ಜೊತೆಗಾರರಾಗಿರುವ ತೆಲುಗು ದೇಶಂ ಮತ್ತು ಎಡ ಪಕ್ಷಗಳು ಈ ವಿಷಯವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿವೆ.
ಇಂತಹ ಸಂದರ್ಭದಲ್ಲಿ ಆಂಧ್ರ ಸರ್ಕಾರದ ಸಿ.ಬಿ.ಐ. ತನಿಖೆಯ ಕೋರಿಕೆ ಹಾಗೂ ಉಚ್ಛ ನ್ಯಾಯಾಲಯದ ಸಿ.ಇ.ಸಿ. ವರದಿಗಳು ಸ್ವಾಗತಾರ್ಹ ಅಂಶಗಳಾಗಿವೆ.

No comments:

Post a Comment