Wednesday, October 10, 2012

News paper clippings of my DVD release function held on 08/10/12 at Chowdaiah Memorial Hall, Bangalore

News paper clippings of my DVD release function held on 08/10/12 at Chowdaiah Memorial Hall, Bangalore.






Friday, April 6, 2012

ನೇತ್ರ ತಜ್ಞನ ನೀರ ಕಾಳಜಿ

ನೇತ್ರ ತಜ್ಞನ ನೀರ ಕಾಳಜಿ



ಮಾರ್ಚ್ 22 ವಿಶ್ವ ನೀರಿನ ದಿನಾಚರಣೆ. ಆ ದಿನ ಲಿವರ್ ಪೂಲ್ ನಲ್ಲಿ ನೇತ್ರ ವೈದ್ಯರಾಗಿರುವ ಡಾ.ಮಧು ಸೀತಪ್ಪನವರ `ಬಯಲು ಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯು ಚಿಕ್ಕಬಳ್ಳಾಪುರದಲ್ಲಿ ಬಿಡುಗಡೆಯಾಯಿತು. ಆ ಕೃತಿಗೆ ಲಕ್ಷ್ಮೀಪತಿ ಕೋಲಾರರವರ `ನೇತ್ರ ತಜ್ಞನ ನೀರ ಕಾಳಜಿ' ಎಂಬ ಮುನ್ನಡಿಯಿದ್ದು ಅದರ ಪಠ್ಯ ಇಲ್ಲಿದೆ:




ಲಕ್ಷ್ಮೀಪತಿ ಕೋಲಾರ

ನೀರನ್ನು ‘ನೀಲಿ ಚಿನ್ನ’ ಎಂದು ಕರೆಯುವುದರಲ್ಲೇ ಮುಂಬರುವ ದಿನಗಳಲ್ಲಿನ ಅದರ ಪ್ರಾಮುಖ್ಯತೆಯನ್ನು ನಾವು ಗುರುತಿಸಬಹುದಾಗಿದೆ. ನೀರಿಗೆ ನಿಸರ್ಗದಲ್ಲಿ ‘ಬದಲಿ’ ಎಂಬುದಿಲ್ಲ. ಸಿಹಿನೀರು ಎಂಬುದು ಈ ಭೂಮಿಯ ಮೇಲಿನ ಅತ್ಯಮೂಲ್ಯವಸ್ತುವಾಗಿದೆ. ಭೂಮಿಯಲ್ಲಿ ಆಕ್ರಮಿಸಿಕೊಂಡಿರುವ ಶೇ. ೭೦ ಭಾಗದ ನೀರಿನಲ್ಲಿ ಜಲಚರಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳ ಪ್ರಾಣ ಪೋಷಕವಾದ ಸಿಹಿನೀರಿನ ಪ್ರಮಾಣ ಕೇವಲ ಶೇ. ೨.೫ರಷ್ಟು ಮಾತ್ರ! ಈ ೨.೫ರಷ್ಟರ ಸಿಹಿನೀರಲ್ಲೂ ಘನರೂಪದ ಮಂಜುಗಡ್ಡೆಯೇ ಶೇ. ೯೦ ಭಾಗದಷ್ಟಿದೆ. ಭೂಮಿಯನ್ನು ಸಮತೋಲನದಲ್ಲಿಟ್ಟಿರುವ ಧ್ರುವ ಪ್ರದೇಶಗಳಲ್ಲಿನ ಮಂಜುಗಡ್ಡೆಗಳನ್ನು ಕರಗಿಸಿದರಂತೂ ಸರ್ವನಾಶ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಂಜುಗಡ್ಡೆಗಳನ್ನು ಹೊರತುಪಡಿಸಿದರೆ ಉಳಿದ ಭೂಮಿಯ ಮೇಲಿನ ಶೇ. ೦.೨೬ರಷ್ಟರ ಸಿಹಿನೀರಿನ ಮೂಲಗಳೊಂದೇ ಮನುಷ್ಯರಾದಿಯಾಗಿ ಎಲ್ಲ ಜೀವಿಗಳ ಪಾಲಿನ ಏಕೈಕ ಜೀವದ್ರವ್ಯವಾಗಿದೆ. ಈ ಅತ್ಯಂತ ಅಲ್ಪ ಪ್ರಮಾಣದ ನೀರಿನ ಮೂಲಗಳೂ ಈಗ ಅಪಾಯದ ಸುಳಿಯಲ್ಲಿ ಸಿಲುಕಿಕೊಂಡಿವೆ! ನೈಸರ್ಗಿಕವಾದ ಫಿಕ್ಸೆಡ್ ಡಿಪಾಸಿಟ್‌ನಂತಿರುವ ಅಂತರ್ಜಲವೆಂಬುದು ಭೂಮಿಯ ಮೇಲಿರುವ ನಮ್ಮ ಬಳಕೆಗಾಗಿ ಇರುವುದಿಲ್ಲವಾದರೂ ದುರಾಸೆಯಿಂದ ಪೀಡಿತರಾದ, ಆಧುನಿಕರೆಂದು ಬೀಗುವ ಮನುಷ್ಯರಾದ ನಾವು ಬೋರ್‌ವೆಲ್‌ಗಳೆಂಬ ಯಂತ್ರಗಳ ಮೂಲಕ ಹೊರತೆಗೆದು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವುದರಿಂದ ಅಂತರ್ಜಲವೇ ಬತ್ತಿ ೧೦೦೦ದಿಂದ ೨೦೦೦ ಅಡಿಗಳ ಆಳ ಮುಟ್ಟಿ ನಿಂತಿದೆ! ಹೀಗೆ ನೀರನ್ನು ಕುರಿತು ತಮ್ಮ ಅಜ್ಞಾನ, ಅಸಡ್ಡೆಗಳ ಕಾರಣದಿಂದಲೇ ಇಡೀ ಭೂಮಿಯಲ್ಲಿ ಜಲಕ್ಷಾಮವು ಸೃಷ್ಟಿಯಾಗುತ್ತಿದೆ.
ಮತ್ತೂ ದುರಂತದ ಸಂಗತಿಯೇನೆಂದರೆ, ನಮ್ಮ ಜೀವಪೋಷಕಕ್ಕೆ ಲಭ್ಯವಿರುವ ಕೇವಲ ೦.೨೬ರಷ್ಟರ ಸಿಹಿನೀರಲ್ಲೂ ಶೇ. ೭೦ ಭಾಗಕ್ಕಿಂತಲೂ ಹೆಚ್ಚಿನಂಶವು ಕೃಷಿ ಉದ್ದೇಶಗಳಿಗೇ ಬಳಕೆಯಾಗುತ್ತಿದೆ. ಉಳಿಕೆಯ ಅತ್ಯಲ್ಪವಾದ ೦.೬ ಅಥವಾ ೦.೭ರಷ್ಟು ಪ್ರಮಾಣದ ನೀರಲ್ಲಿ ಬೃಹತ್ ಕೈಗಾರಿಕೆಗಳು, ಕಟ್ಟಡ-ಅಣೆಕಟ್ಟೆಗಳ ಕೆಲಸಗಳು ತಮ್ಮ ಸಿಂಹಪಾಲನ್ನು ನಿರ್ದಾಕ್ಷಿಣ್ಯವಾಗಿ ಬಳಸುತ್ತಿವೆ. ಉಳಿದದ್ದರಲ್ಲಿ ಮನುಷ್ಯ, ಪಶುಪಕ್ಷಿ ಪ್ರಾಣಿಗಳಾದಿಯಾಗಿ ಎಲ್ಲ ಜೀವಸಂಕುಲದ ಜೀವನ್ಮರಣದ ಪ್ರಶ್ನೆಯನ್ನು ಪ್ರಕೃತಿ ಹೇಗೋ ನಿಬಾಯಿಸುತ್ತಿದೆ. ಆದ್ದರಿಂದಲೇ ನೀರನ್ನು ನೀಲಿ ಚಿನ್ನವೆಂದು ತಜ್ಞರು ಕರೆದಿರುವುದು. ಬಲ್ಲವರು ಊಹಿಸಿರುವಂತೆ ಮುಂಬರುವ ದಿನಗಳಲ್ಲಿನ ಜಾಗತಿಕ ಯುದ್ಧಗಳು ನೀರಿಗಾಗಿಯೇ ನಡೆಯುತ್ತವೆ. ಗಾಭರಿ ಹುಟ್ಟಿಸುವ ಈ ಅಂಕಿ ಅಂಶಗಳಾಚೆಗೂ ನಾವು ಚರ್ಚೆಯನ್ನು ವಿಸ್ತರಿಸಿ ನೋಡಬಹುದಾಗಿದೆ. ನಮಗೀಗ ಲಭ್ಯವಿರುವ ೦.೨೬ರಷ್ಟರ ನೀರೇ ಸಾಕಾಗುವಂತಿದೆ, ಆದರೆ ನಾವು ವಿವೇಕಯುತವಾಗಿ ಬಳಸಿದಲ್ಲಿ ಮಾತ್ರ! ನೀರನ್ನು ಅಮೂಲ್ಯವೆಂದು ಪರಿಗಣಿಸದೆ ಪೋಲು ಮಾಡುತ್ತಿರುವುದರಿಂದ, ಅಂದರೆ ಮಳೆ ನೀರು ವ್ಯರ್ಥವಾಗಿ ಹರಿದು ಮೋರಿ-ಚರಂಡಿಗಳನ್ನು ಸೇರಿ ಕಲುಷಿತಗೊಂಡು ಬಳಕೆಗೆ ಬಾರದಂತಾಗುತ್ತಿರುವುದು; ಬಳಕೆಯ ನಂತರದ ಹೆಚ್ಚುವರಿ ನದಿಗಳ ನೀರು ಸಮುದ್ರಗಳನ್ನು ಸೇರಿ ಉಪ್ಪುನೀರಾಗಿ ಪರಿವರ್ತನೆಗೊಳ್ಳುತ್ತಿರುವುದು; ಇತ್ಯಾದಿಯೊಂದೇ ಜಲಕ್ಷಾಮಕ್ಕೆ ಕಾರಣವಾಗುತ್ತಿಲ್ಲ. ಬದಲಿಗೆ ಇತಿಹಾಸವೆಂದೂ ಕಂಡು ಕೇಳರಿಯದಂತಹ ಜನಸಂಖ್ಯಾ ಬಾಹುಳ್ಯವೂ ಸಿಹಿನೀರಿನ ಮೇಲೆ ತೀವ್ರವಾದ ಒತ್ತಡವನ್ನು ಹೇರಿದೆಯೆಂಬದೂ ಗಮನಾರ್ಹ. ಇದೂ ಸಾಲದೆಂಬಂತೆ- ಗಾಯದ ಮೇಲೆ ಉಪ್ಪು ಸವರಿದಂತೆ, ಭೂಮಿಯ ಮೇಲಿನ ಸಿಹಿನೀರು ಮತ್ತು ಅಂತರ್ಜಲ ಖಾಲಿಯಾಗುತ್ತಿರುವಷ್ಟರ ಪ್ರಮಾಣದಲ್ಲಿ ಸಮುದ್ರಗಳ ಉಪ್ಪು ನೀರು ಆವಿಯಾಗಿ ಸಿಹಿನೀರಾಗಿ ಪರಿವರ್ತನೆಗೊಂಡು ಮಳೆಯ ರೂಪದಲ್ಲಿ ನಮಗೆ ಪುನರ್ ಲಭ್ಯವಾಗುತ್ತಿಲ್ಲದಿರುವುದೂ ಕೂಡ ನೀರಿನ ಸಮಸ್ಯೆ ದುಪ್ಪಟ್ಟುಗೊಂಡು ಜೀವನ್ಮರಣದ ಆತಂಕವೊಂದು ಇಂದು ನಮಗೆದುರಾಗಿದೆ. ಇಂತಹ ಆತಂಕದ ಪ್ರಶ್ನೆಗಳನ್ನೆಲ್ಲಾ ತನ್ನೆದುರಿಗಿಟ್ಟುಕೊಂಡು ನೀರಿನ ಮೂಲಕದ ಜೀವಕಾಳಜಿಯ ಹೋರಾಟವೊಂದನ್ನು ಸದ್ದಿಲ್ಲದೆ ಪ್ರಾರಂಭಿಸಿದವರು ಲಂಡನ್‌ನಲ್ಲಿ ನೇತ್ರ ತಜ್ಞರಾಗಿರುವ ಡಾ. ಮಧು ಸೀತಪ್ಪನವರು. ಮಧು ನಮ್ಮೂರಿನವರಾದ್ದರಿಂದ ನನಗೆ ಹಳೇ ಪರಿಚಯದ ಸ್ನೇಹಿತರು. ಬೆಂಗಳೂರಿಗೆ ಅವರು ಬಂದು ಭೇಟಿಯಾದಾಗಲೇ ಅಥವಾ ಅವರ ನೆನಪಾದಾಗಲೋ ನನಗೆ ‘ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲೇಬೇಕೆಂಬ ಅಖಂಡ ಆತ್ಮವಿಶ್ವಾಸದ ವ್ಯಕ್ತಿತ್ವ’ವೊಂದರ ಸಾಮೀಪ್ಯದ ಅನುಭವವಾಗುತ್ತದೆ. ಆರು ಅಡಿಗೂ ಮಿಗಿಲು ಎತ್ತರದ ಈ ಮಧು ಎಂಬ ಮನುಷ್ಯ ಅಗಾಧವಾದ ನೆನಪಿನ ಶಕ್ತಿ, ವಿಪುಲ ಮಾಹಿತಿ ಹಾಗೂ ಅನ್ಯಜ್ಞಾನ ಶಿಸ್ತುಗಳೆಲ್ಲದರಲ್ಲೂ ಹೊಕ್ಕಾಡಿ ಬಂದ ಬಹುಶ್ರುತರಂತೆ ಗೋಚರಿಸಿ, ತನ್ನ ಆರ್ಜಿತ ಜ್ಞಾನವನ್ನೆಲ್ಲ ಸಾಮಾಜಿಕ ನ್ಯಾಯಬದ್ಧತೆಯ ಯೋಜನೆಗಳಿಗೆ ಅನ್ವಯಿಸಿ ಕಾರ್ಯಾನುಷ್ಠಾನಗೊಳಿಸಲೇಬೇಕೆಂಬ ಛಲದ ತೀವ್ರತೆಯನ್ನು ಮತ್ತು ಅದರ ಶಾಖವು ಆರದಂತೆ ಕಾಯ್ದುಕೊಳ್ಳುವ ಬಗೆಯನ್ನು ಕಂಡಾಗಲೇ ಆ ಎತ್ತರವೆಂಬುದು ಕೇವಲ ಭೌತಿಕವಾದದ್ದಲ್ಲ ಎಂದೇ ಅನಿಸುತ್ತದೆ. ಇದು ಬಹುಶಃ ಸಮಾಜಮುಖಿಯಾಗಿ ಸದಾ ಚಟುವಟಿಕೆಯಿಂದಿರುವ ಅವರ ತಾಯಿ ಶ್ರೀಮತಿ ಬಿ. ಶಾರದ ಸೀತಪ್ಪನವರ ಗುಣವೆನಿಸುತ್ತದೆ.
ಮಧು ಬಾಲ್ಯದಲ್ಲೇ ಒಬ್ಬ ಕ್ರೀಡಾಪಟುವಾಗಿ ನನ್ನ ನೆನಪಿನ ಲೋಕವನ್ನು ಪ್ರವೇಶಿಸಿದವರು. ನಮ್ಮಿಬ್ಬರ ಮನೆಗಳು ಕೂದಲೆಳೆಯ ದೂರದಲ್ಲಿದ್ದವೆಂಬುದನ್ನು ಬಿಟ್ಟರೆ ನನಗೂ ಮಧುವಿಗೂ ಆಗ ಅಂತಹ ನಿಕಟ ಸಂಪರ್ಕವೇನಿರಲಿಲ್ಲ. ನಾನಂತೂ ಆಗ ದಲಿತ ಚಳುವಳಿಯಲ್ಲಿ ಮುಳುಗಿ ಹೋಗಿದ್ದೆ. ಚಳುವಳಿಗಳಲ್ಲಿದ್ದೆವಾದ ಕಾರಣ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧವೂ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದೆವು. ಅಂತಹ ಕೆಲವು ಸಂದರ್ಭಗಳಲ್ಲಿ ಶ್ರೀಮತಿ ಬಿ. ಶಾರದ ಸೀತಪ್ಪನವರೂ ಭಾಗವಹಿಸುತ್ತಿದ್ದರಾಗಿ ಅವರ ಪರಿಚಯ ನನಗೆ ಅಲ್ಪಸ್ವಲ್ಪವಿತ್ತು. ಎಸ್.ಎಫ್.ಐ.ನಲ್ಲಿದ್ದ ಜಿ.ಸಿ.ಬಯ್ಯಾರೆಡ್ಡಿಯವರು ಮಧು ಅವರ ತಂದೆಯ ಕಡೆಯ ಸಂಬಂಧಿ ಯಾದ್ದರಿಂದಲೂ, ಸಮಾನ ಮನಸ್ಕರಾದ ನಾನು ಮತ್ತು ಬಯ್ಯಾರೆಡ್ಡಿಯವರಿಬ್ಬರೂ ವ್ಯವಸ್ಥೆಯ ವಿರೋಧೀ ಹೋರಾಟಗಳಲ್ಲಿ ತೊಡಗಿಕೊಂಡಿದ್ದೆವಾದ್ದರಿಂದಲೂ ಈ ಸಂಬಂಧ ಇನ್ನಷ್ಟು ಹತ್ತಿರವಾಯಿತು. ಕೊನೆಗೆ ಸಾಹಿತ್ಯ, ಚಳವಳಿ ಹಾಗೂ ಸಂಸ್ಕೃತಿ ಚಿಂತನೆಗಳ ಸಮಾನ ಕಾರಣಗಳಿಂದಾಗಿ ಒಗ್ಗೂಡಿದ್ದ ಕೋಲಾರದ ಪ್ರಗತಿಪರ ಮಿತ್ರರ ಬಳಗದಲ್ಲಿದ್ದ ಡಾ. ಜೆ. ಬಾಲಕೃಷ್ಣ ಅವರು ಆ ಮನೆಯ ನೆಂಟನಾದನಂತರ ನಾನೂ ಆ ಕುಟುಂಬಕ್ಕೆ ತೀರಾ ಹತ್ತಿರವಾಗುವಂತಾಯಿತು. ಅಂದಿನಿಂದಲೂ ಮಧು ಅವರೊಂದಿಗಿನ ಸ್ನೇಹ ಅಬಾಧಿತವಾಗಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲೇ ನಾವು ಆಗೀಗ ಭೇಟಿಯಾಗುತ್ತಿದ್ದುದು.
ಕಳೆದ ಕೆಲವು ವರ್ಷಗಳಿಂದಲೂ ಮಧುವಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಒಳಗೊಂಡಂತೆ ಇಡೀ ಈ ಬಯಲು ಸೀಮೆಯ ನಿರಂತರ ಬರಗಾಲದ ಭೀಕರ ಪರಿಸ್ಥಿತಿ, ಅಂತರ್ಜಲವು ಪಾತಾಳ ಸೇರಿ, ಫ್ಲೋರೈಡ್‌ಯುಕ್ತ ವಿಷಮಯ ನೀರು ಮಾತ್ರ ಬಳಕೆಗೆ ಸಿಗುತ್ತಿರುವುದರ ಭಯಾನಕತೆ ಹಾಗೂ ಭವಿಷ್ಯದ ದಿನಗಳ ಜಲಕ್ಷಾಮವು ದುಃಸ್ವಪ್ನವಾಗಿ ಕಾಡುತ್ತಿರುವುದನ್ನು ನಾನೂ ಸೂಕ್ಷ್ಮವಾಗಿಯೇ ಗಮನಿಸಿದ್ದೆ. ದೂರದ ಲಂಡನ್‌ನಲ್ಲಿದ್ದುಕೊಂಡೇ ಇಲ್ಲಿನ ಜಲಕ್ಷಾಮದ ಧಾವಂತದ ಹೆಜ್ಜೆ ಗುರುತುಗಳನ್ನು ಮಧು ಆತಂಕದಿಂದ ಗಮನಿಸುತ್ತಿದ್ದರು. ಬಹುಶಃ; ಇಂತಹ ಆತಂಕಗಳ ದೆಸೆಯಿಂದಾಗಿಯೇ ಅವರು ಈ ಭಾಗದ ಶಾಶ್ವತ ನೀರಾವರಿ ಹೋರಾಟಗಾರರಿಗೆ ಹತ್ತಿರವಾದಂತೆಯೇ, ಇಂಜಿನಿಯರ್ ಪರಮಶಿವಯ್ಯನವರಿಗೂ ಹತ್ತಿರವಾದಂತಿದೆ. ಪರಮಶಿವಯ್ಯನವರು ಮಲೆನಾಡಿನ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತುಭಾಗದ ಪ್ರದೇಶದಲ್ಲಿನ ಮಳೆ ಕೊಯ್ಲಿನ ಮೂಲಕ, ಸಮುದ್ರಕ್ಕೆ ವ್ಯರ್ಥವಾಗಿ ಸೇರಿಹೋಗುವ ಹತ್ತು ವರ್ಷಗಳ ಸರಾಸರಿ ನೀರಿನಷ್ಟು ಪ್ರಮಾಣದ ಮಳೆನೀರನ್ನು ಮಾತ್ರ ಸಂಗ್ರಹಿಸಿ, ಅದನ್ನು ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಕುರಿತು ವೈಜ್ಞಾನಿಕ ವರದಿಯನ್ನು ಸಲ್ಲಿಸಿ, ಅದರ ಅನುಷ್ಠಾನಕ್ಕಾಗಿ ಪರಿತಪಿಸುತ್ತಿರುವವರು. ಹೀಗಾಗಿ ಸಹಜವಾಗಿಯೇ ಮಧು ಅವರು ಪರಮಶಿವಯ್ಯ ನವರಿಗೆ ಹತ್ತಿರದವರಾದರು, ಆಪ್ತರಾದರು. ಒಂದೆರಡು ವರ್ಷಗಳ ಹಿಂದೆಯೇ ನಾನೂ ಮಧುವಿನ ಜೊತೆ ಪರಮಶಿವಯ್ಯನವರನ್ನು ಹಲವಾರು ಬಾರಿ ಭೇಟಿಯಾಗಿ ಅವರ ವರದಿಯ ಕುರಿತು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಪರಮಶಿವಯ್ಯನವರ ವರದಿಯನ್ನು ಸಹಜವಾಗಿಯೇ ಕರಾವಳಿ ಭಾಗದ ರಾಜಕೀಯ ಧುರೀಣರು, ಪರಿಸರವಾದಿಗಳು ತೀವ್ರವಾಗಿಯೇ ವಿರೋಧಿಸುತ್ತಿದ್ದರು. ಆದರೆ ಹೀಗೆ ವಿರೋಧಿಸುವವರಲ್ಲಿ ಬಹುತೇಕ ಮಂದಿ ಪರಮಶಿವಯ್ಯನವರ ವರದಿಯನ್ನು ಅಧ್ಯಯನ ಮಾಡಿದವರೂ ಅಲ್ಲ, ಕನಿಷ್ಟ ಅದರ ಸಂಕ್ಷಿಪ್ತವೂ, ನಿಖರವೂ ಆದ ಮಾಹಿತಿಯನ್ನೂ ಪಡೆದವರಲ್ಲ.

ಪರಮಶಿವಯ್ಯ

ಕರಾವಳಿ ಭಾಗದ ಜನರಿಗೆ ತಮ್ಮ ನೆಲದಲ್ಲಿ ಹರಿಯುವ ನೇತ್ರಾವತಿ ನದಿಯ ಹರಿದ ದಿಕ್ಕನ್ನೇ ಬದಲಿಸಿ ಇಡೀ ನೇತ್ರಾವತಿ ನದಿಯನ್ನೇ ಬಯಲು ಸೀಮೆಯಲ್ಲಿ ಹರಿಯುವಂತೆ ಮಾಡಿಕೊಳ್ಳುತ್ತಾರೆಂಬ ವಿಪರೀತದ ಕಲ್ಪನೆಯಿದ್ದು. ಆ ಕಾರಣಕ್ಕಾಗಿಯೇ ಅವರು ಪರಮಶಿವಯ್ಯನವರ ವರದಿಯನ್ನು ‘ನೇತ್ರಾವತಿ ನದಿ ತಿರುವು ಯೋಜನೆ’ ಎಂದೇ ತಪ್ಪು ತಪ್ಪಾಗಿ ಪ್ರಚುರಗೊಳಿಸಿ ಕರಾವಳಿ ಪ್ರದೇಶದ ಸಮುದಾಯದಲ್ಲಿ ಭಾವನಾತ್ಮಕ ವಿರೋಧದ ಬಹುದೊಡ್ಡ ಅಲೆಯನ್ನು ಹುಟ್ಟು ಹಾಕಿದರು. ಉಳಿದಂತೆ ಪರಿಸರವಾದಿಗಳ ಆತಂಕಗಳೆಲ್ಲವೂ ನಮ್ಮ ಆತಂಕಗಳು ಕೂಡ. ಆದರೆ ನೈಸರ್ಗಿಕವಾದ ಏನೊಂದನ್ನೂ ಬದಲಿಸಲೇ ಕೂಡದೆಂಬ ಹಠಮಾರಿ ನಿಲುವು ಅನೇಕ ಪರಿಸರವಾದಿಗಳಲ್ಲಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕೆ ಬದಲಾಗಿ ಪರಮಶಿವಯ್ಯನವರ ವರದಿಯನ್ನು ಅನುಷ್ಠಾನಗೊಳಿಸಿದರೆ ಆಗಬಹುದಾದ ಪರಿಸರ ಹಾನಿಯನ್ನು ತಡೆಗಟ್ಟುವುದು ಹೇಗೆಂಬ ಬಗ್ಗೆ ಚಿಂತಿಸುವುದು ಹೆಚ್ಚು ಸೂಕ್ತವಾದದ್ದು. ಯಾಕೆಂದರೆ ಗುಂಡ್ಯಾ ಜಲವಿದ್ಯುತ್ ಯೋಜನೆಯಲ್ಲಿನಂತೆ ಆರು ಸಾವಿರ ಹೆಕ್ಟೇರುಗಳ ಕಾಡುನಾಶದ ಸಮಸ್ಯೆ ಇಲ್ಲಿಲ್ಲ. ಕೇವಲ ೨೯೫ ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವು ಮಾತ್ರ ನೇತ್ರಾವತಿ ಜಲಾನಯನ ಪ್ರದೇಶದ ಶೇ. ಹತ್ತು ಭಾಗದಲ್ಲಿನ ಮಳೆ ಕೊಯ್ಲು ಪದ್ಧತಿಯ ಮೂಲಕ ಸಂಗ್ರಹಿಸಲಾಗುವ ನೀರನ್ನು ಹರಿಸಲು ಅಗತ್ಯವಾಗುವ ಕಾಲುವೆಗಳ ನಿರ್ಮಾಣಕ್ಕಾಗಿ ಬೇಕಾಗುತ್ತದೆಂದು ಮಧು ಅವರು ತಮ್ಮ ಲೇಖನಗಳ ಉದ್ದಕ್ಕೂ ಪದೇ ಪದೇ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅರಣ್ಯ ಪ್ರದೇಶದಲ್ಲಿ ಈ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಬೇಕಾದ ಅಗತ್ಯವೇ ಇಲ್ಲ. ಜಲಸಂಗ್ರಹಾಗಾರವು ಕೂಡ ಅರಣ್ಯ ಪ್ರದೇಶದಲ್ಲಿರುವುದಿಲ್ಲ. ಈ ಯೋಜನೆಯ ಅನುಷ್ಠಾನದ ನಂತರವೂ ಕೂಡ ನೇತ್ರಾವತಿ ನದಿ ಎಂದಿನಂತೆಯೇ ತನ್ನ ಮಾಮೂಲು ಪಾತ್ರದಲ್ಲಿಯೇ ಹರಿಯುತ್ತದೆ. ಆದರೆ ನೇತ್ರಾವತಿ ನದಿಯ ನೀರಿನ ಗರಿಷ್ಠ ಪ್ರಮಾಣದ ಬಳಕೆಯ ನಂತರದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹತ್ತು ವರ್ಷಗಳ ಸರಾಸರಿ ಪ್ರಮಾಣದ ನೀರನ್ನು ಮಾತ್ರ ಮಳೆಕೊಯ್ಲಿನ ಪದ್ಧತಿಯ ಮೂಲಕ ಸಂಗ್ರಹಿಸಿ ‘ಗಾರ್ಲೆಂಡ್ ಕೆನಾಲ್’ ಮೂಲಕ ಹರಿಸಲಾಗುವುದೆಂದು ಮಧು ಅವರು ಪರಮಶಿವಯ್ಯನವರ ವರದಿಯನ್ನಾಧರಿಸಿ ವಿವರಗಳನ್ನು ಒದಗಿಸಿದ್ದಾರೆ.
ಮಧು ಅವರು ಪರಮಶಿವಯ್ಯನವರ ವರದಿಯ ಕುರಿತಂತೆ ಎದ್ದಿರುವ ಅನುಮಾನಗಳಿಗೆಲ್ಲಾ ತಮ್ಮ ಲೇಖನಗಳ ಉದ್ದಕ್ಕೂ ಸಮರ್ಪಕ ಹಾಗೂ ಸಮರ್ಥ ರೀತಿಯ ಪರಿಹಾರಗಳನ್ನು ಕೂಡ ಸೂಚಿಸಿದ್ದಾರೆ. ಉದಾಹರಣೆಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊಯ್ಲು ಪದ್ಧತಿಯ ಮೂಲಕ ನೀರು ಸಂಗ್ರಹಿಸುವುದರಿಂದ ಆಗುವ ಪರಿಸರ ಹಾನಿಗಿಂತಲೂ ಹೆಚ್ಚಿನ ಪ್ರಮಾಣದ ಪರಿಸರ ಸಮತೋಲನದ ಕೆಲವು ಬಯಲು ಸೀಮೆಯ ಪ್ರದೇಶದಲ್ಲಿ ಆಗುವುದರಿಂದ ಒಟ್ಟಾರೆಯಾಗಿ ಈ ವರದಿಯು ಪರಿಸರ ವಿರೋಧಿಯಲ್ಲವೆಂದು ವಾದಿಸುತ್ತಾರೆ. ಬಯಲು ಸೀಮೆಯಲ್ಲಿನ ಸಹಸ್ರಾರು ಕೆರೆಗಳಿಗೆ ಈ ನೀರು ಹರಿಯುವುದರಿಂದ ಒಟ್ಟಾರೆ ಈ ಪ್ರದೇಶದ ಅಂತರ್ಜಲದ ಮಟ್ಟವು ಹೆಚ್ಚಿ, ಆ ಮೂಲಕ ಹಸಿರು ಕೂಡ ಕಂಗೊಳಿಸಬಲ್ಲದು. ಪ್ಲೋರೈಡ್‌ನ ಸಮಸ್ಯೆಯೂ ಪರಿಹಾರವಾಗಿ ಬಯಲು ಸೀಮೆಯ ಮಕ್ಕಳ ಹಲ್ಲು ಮತ್ತು ಮೂಳೆಗಳು ಊನಗೊಳ್ಳದೆ ಸುರಕ್ಷಿತವಾಗಿರಬಲ್ಲವು. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದ ರೊಂದಿಗೆ ಕೃಷಿ ಚಟುವಟಿಕೆಗಳು ಚುರುಕಾಗಿ, ಉತ್ಪಾದನೆಯೂ ಹೆಚ್ಚಿ, ಆತ್ಮಹತೆ ಮತ್ತು ಸಾಲಗಳ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿರುವ ರೈತಾಪಿ ಸಮುದಾಯದ ಬದುಕಗಳೂ ಉತ್ತಮಗೊಳ್ಳುತ್ತವೆ; ಅವರು ಉಸಿರಾಡುವುಂತಾಗುತ್ತದೆಂಬುದು ಮಧು ಅವರ ಕಾಳಜಿ ವತ್ತು ನಿಲುವು.
ಮಧು ಅವರು ತಮ್ಮ ಲೇಖನಗಳಲ್ಲಿ ಮಂಡಿಸಿರುವ ಕೆಲವು ಅಂಶಗಳು ಪರಿಸರ ಕುರಿತ ಕುರುಡು ವಾದಗಳಿಗೆ ಮತ್ತು ಪರಮಶಿವಯ್ಯನವರ ವರದಿಯ ಕುರಿತ ತಪ್ಪು ಅಭಿಪ್ರಾಯಗಳಿಗೆ ಉತ್ತರವೆಂಬಂತಿರುವುದನ್ನು ಓದುಗರು ಗಮನಿಸಬಹುದಾಗಿದೆ. ಕೆಲವು ಅಂಶಗಳ ಸ್ಯಾಂಪಲ್ ಹೀಗಿವೆ: (೧) ಪ್ರತಿ ವರ್ಷ ಕನಿಷ್ಠ ೨,೫೦೦ ಟಿ.ಎಂ.ಸಿ.ಗಳಷ್ಟು ನೀರು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ ಅರಬ್ಬಿ ಸಮುದ್ರಕ್ಕೆ ಹರಿದುಹೋಗುತ್ತಿದೆ. (೨) ೨೦೨೦ರ ಹೊತ್ತಿಗೆ ನಮ್ಮ ರಾಜ್ಯವೊಂದರಲ್ಲೇ ಸುಮಾರು ೨೦ ದಶಲಕ್ಷ ಜನ ನೀರಿನ ಅಭಾವದ ಕಾರಣದಿಂದಾಗಿಯೇ ಸ್ಥಳಾಂತರಗೊಳ್ಳಬೇಕಾಗುತ್ತದೆ. (೩) ಪರಮಶಿವಯ್ಯನವರ ವರದಿಯ ಪ್ರಕಾರ ಕರಾವಳಿ ಜಿಲ್ಲೆಗಳ ೨ ಲಕ್ಷ ರೈತರಿಗೂ ವರ್ಷದ ೨೪ ಗಂಟೆಗಳ ಕಾಲವೂ ನೀರು ಒದಗಿಸಬಹುದಲ್ಲದೆ, ಕುಡಿಯುವ ನೀರನ್ನೂ ಪೂರೈಸಬಹುದು. (೪) ನೇತ್ರಾವತಿ ಜಲಾನಯನ ಪ್ರದೇಶದಲ್ಲಿನ ಮಳೆಕೊಯ್ಲಿನ ಮೂಲಕ ಸಂಗ್ರಹಿಸಲಾಗುವ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ಬಹುತೇಕ ಭಾಗಗಳಿಗೆ ಹರಿಸಬಹುದಾಗಿದ್ದು, ವಿದ್ಯುಚ್ಛಕ್ತಿಯ ಹೆಚ್ಚಿನ ಅಗತ್ಯವಿರುವುದಿಲ್ಲ. (೫) ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಶೇ. ೫೦ರಷ್ಟು ಒಳರೋಗಿಗಳು ಕಲುಷಿತ ನೀರಿನಿಂದ ಬರುವ ಸಾಂಕ್ರಾಮಿಕ ರೋಗಗಳನ್ನು ಹೊಂದಿರುತ್ತಾರೆ. (೬) ನಾವು ಈ ಭೂಮಿಯ ಮೇಲೆ ಲಭ್ಯವಿರುವ ಸಿಹಿನೀರಿನ ಒಟ್ಟು ಪ್ರಮಾಣದಲ್ಲಿನ ಶೇ. ೧ರಷ್ಟನ್ನು ಮಾತ್ರ ಉಪಯೋಗಿಸುತ್ತಿದ್ದು, ಉಳಿದ ನೀರು ಸಮುದ್ರಕ್ಕೆ ವ್ಯರ್ಥ ಹರಿದುಹೋಗುತ್ತಿದೆ. (೭) ನೀರಿನ ತೀವ್ರ ಅಭಾವದಿಂದ ಬೆಂಗಳೂರಿನಿಂದ ಕೇವಲ ೭೦ ಕಿ.ಮೀ.ಗಳ ದೂರದ ಪಾವಗಡದಲ್ಲಿ ನೆಲದ ಮರುಭೂಮೀಕರಣದ ಅಪಾಯವು ಈಗಾಗಲೇ ಎದುರಾಗಿದೆ. (೮) ನೇತ್ರಾವತಿ ನದಿಯ ೫೨೧ ಟಿ.ಎಂ.ಸಿ.ಯಷ್ಟು ನೀರು ಪ್ರತಿವರ್ಷ ಸಮುದ್ರದ ಪಾಲಾಗುತ್ತಿದ್ದು, ಅದರ ಪೈಕಿ ೪೨೧ ಟಿ.ಎಂ.ಸಿ.ಯಷ್ಟು ನೀರು ಮೇ-ಸೆಪ್ಟೆಂಬರ್ ತಿಂಗಳುಗಳ ನಡುವಿನ ಮಳೆಗಾಲದಲ್ಲೇ ಸಮುದ್ರದ ತೆಕ್ಕೆಗೆ ಬೀಳುತ್ತಿದೆ. ಅದರ ಪೈಕಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಪರಮಶಿವಯ್ಯನವರು ರೂಪಿಸಿರುವ ಯೋಜನೆಯ ಮೂಲಕ ಬಯಲು ಸೀಮೆಗೆ ಹರಿಸಲು ಉದ್ದೇಶಿಸಿರುವುದು. ಆದ್ದರಿಂದ ನೇತ್ರಾವತಿ ನದಿಯ ನೀರಿಗೆ ಸಮುದ್ರದ ನೀರು ನುಗ್ಗಿ ಉಪ್ಪಿನಾಂಶ ಹೆಚ್ಚುವುದರಿಂದ ಜಲಚರಗಳ ಸಿಹಿನೀರು ಮತ್ತು ಆಹಾರಕ್ಕೆ ತೊಂದರೆಯಾಗುತ್ತದೆಂಬುದು ಕೇವಲ ಊಹೆ ಮತ್ತು ಹಾಸ್ಯಾಸ್ಪದ ವಿಚಾರವಾಗಿದೆ. ಮಳೆಗಾಲದ ನೇತ್ರಾವತಿಯ ನೀರಿನಲ್ಲಿ ಶೇ. ೧೦ ಭಾಗ ಕಡಿಮೆಯಾಗುವುದರಿಂದಲೇ ಸಮುದ್ರದ ನೀರು ನದಿಗೆ ನುಗ್ಗುವುದಾದರೆ ಬತ್ತದಂತೆ ಹರಿಯುವ ಬೇಸಿಗೆಯಲ್ಲಿನ ಕಥೆಯೇನು (೯) ೪೨ ಟಿ.ಎಂ.ಸಿ. ನೀರು ಸಮುದ್ರಕ್ಕೆ ಹರಿಯುವುದನ್ನು ತಪ್ಪಿಸಿದ ಕೂಡಲೇ ಸಮುದ್ರದ ಲವಣಾಂಶವು ಹೆಚ್ಚಿ ಮೀನುಗಾರರಿಗೆ ತೊಂದರೆಯಾಗುತ್ತದೆನ್ನು ವವರು ಅದೇ ಕರಾವಳಿ ಪ್ರದೇಶದಲ್ಲಿ ಅದೇ ಅರಬ್ಬಿ ಸಮುದ್ರಕ್ಕೆ ಪ್ರತಿವರ್ಷ ೨೧ ಸಣ್ಣ್ಣ ನದಿಗಳಿಂದ ೨೦೦೦ ಟಿ.ಎಂ.ಸಿ.ಯಷ್ಟು ಸಿಹಿ ನೀರು ಸೇರುತ್ತಿದೆಯೆಂಬುದನ್ನು ಮರೆತಿರುತ್ತಾರೆ. ಜೊತೆಗೆ ಸಮುದ್ರದ ಮೇಲೆ ಬೀಳುವ ಮಳೆಯಿಂದಾಗಿ ಸಹಸ್ರಾರು ಟಿ.ಎಂ.ಸಿ.ಗಳಷ್ಟು ಸಿಹಿನೀರು ಸಮುದ್ರಕ್ಕೆ ಬೆರೆಯುತ್ತಲೇ ಇರುತ್ತದೆಂಬೂದೂ ನಮ್ಮ ಗಮನದಲ್ಲಿರಬೇಕು. (೧೦) ೪೨ ಟಿ.ಎಂ.ಸಿ.ಗಳಷ್ಟು ಸಿಹಿನೀರಿನ ಕೊರತೆಯ ದೆಸೆಯಿಂದಾಗುವ ಏರುಪೇರನ್ನು ಸಹಿಸಿ ಸಮದೂಗಿಸಿಕೊಳ್ಳಬಲ್ಲ ಶಕ್ತಿ ಅರಬ್ಬಿ ಸಮುದ್ರ ಹಾಗೂ ಮಲೆನಾಡಿನ ಪ್ರಕೃತಿಗಿದೆ. (೧೧) ೧೯ನೇ ಶತಮಾನದ ಕೊನೆಯವರೆಗೂ ಕಾವೇರಿ ನದಿಯ ೭೦೦ ಟಿ.ಎಂ.ಸಿ. ನೀರು ಹಾಗೂ ಕೃಷ್ಣಾನದಿಯ ೨೦೬೦ ಟಿ.ಎಂ.ಸಿ. ನೀರು ಬಂಗಾಳ ಕೊಲ್ಲಿಯನ್ನು ಸೇರುತ್ತಿತ್ತು. ಆದರೆ ಈಗ ಈ ಎರಡೂ ನದಿಗಳಿಂದ ಕೇವಲ ೬೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಸಮುದ್ರಕ್ಕೆ ಸೇರುತ್ತಿದೆಯೆಂದ ಮಾತ್ರಕ್ಕೆ ಪೂರ್ವ ಕರಾವಳಿಯಲ್ಲಿನ ಮೀನುಗಾರಿಕೆಯ ಉದ್ಯಮವೇ ನಿಂತುಹೋಗಿದೆಯೇ ಅಥವಾ ಮೀನುಗಾರರೆಲ್ಲರೂ ಗುಳೆಹೋಗಿದ್ದಾರೆಯೇ? ೨೬೯೫ ಟಿ.ಎಂ.ಸಿ.ಯಷ್ಟು ಸಿಹಿನೀರು ಬಂಗಾಳಕೊಲ್ಲಿಗೆ ತಪ್ಪಿದಾಗಲೇ ಅನಾಹುತಗಳೇನೂ ಸಂಭವಿಸಿಲ್ಲದಿರುವಾಗ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರು ಸಮುದ್ರಕ್ಕೆ ಕೊರತೆ ಬೀಳುವುದರಿಂದ ಏನೆಂತಹ ದೊಡ್ಡ ಪ್ರಮಾಣದ ಪ್ರಮಾದ ಎದುರಾದೀತು ಎನ್ನುವಂತಹ ತರ್ಕಗಳನ್ನು ಲೇಖಕರು ಪುಸ್ತಕದುದ್ದಕ್ಕೂ ಮಂಡಿಸಿದ್ದಾರೆ. ಇಂತಹ ವಿಪುಲ ಮಾಹಿತಿ-ಅಂಶಗಳನ್ನಾಧರಿಸಿ ಮಧು ಅವರು ಬರೆದಿರುವ ಲೇಖನಗಳೆಲ್ಲವೂ ಪರಿಸರವಾದಿಗಳು ಮತ್ತು ಬಯಲು ಸೀಮೆಯ ನೀರಾವರಿ ಹೋರಾಟಗಾರರೆಲ್ಲರಿಗೂ ಅಧ್ಯಯನ ಯೋಗ್ಯ. ಆಕರಗಳಾಗಿವೆ. ಇಷ್ಟರ ನಡುವೆಯೂ ಪರಿಸರ ಮತ್ತು ಜೀವವೈವಿಧ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಅಧ್ಯಯನಕ್ಕೊಳಪಡಿಸಿಯೇ ಹೆಜ್ಜೆ ಇಡಬೇಕೆಂಬ ವಿವೇಕವನ್ನೂ, ಸಂಯಮವನ್ನೂ ತಮ್ಮ ಬರವಣಿಗೆಯ ಉದ್ದಕ್ಕೂ ಪ್ರದರ್ಶಿಸಿದ್ದಾರೆ. ಮಧು ಪರಿಸರ ವಿರೋಧಿಯಲ್ಲವೆಂಬುದನ್ನು ಯಾರೂ ಮರೆಯುವಂತಿಯೇ ಇಲ್ಲ.
ತಮಿಳುನಾಡಿನ ಪೆರಿಯಾರ್ ಮತ್ತು ವೈಗೈ ನದಿಗಳ ಜೋಡಣೆಯನ್ನು ಮಾಡಿದ ಬ್ರಿಟಿಷ್ ಇಂಜಿನಿಯರ್ ಜಾನ್ ಪೆನ್ನಿಕುಕ್ ಅವರ ಸಾಹಸಗಾಥೆಯಂತೂ ಮನಮಿಡಿಯುವಂತಿದೆ. ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಹರಿಯುತ್ತಿದ್ದ ಪೆರಿಯಾರ್ ನದಿಯ ಸಾವಿರಾರು ಟಿ.ಎಂ.ಸಿ.ಗಳಷ್ಟು ನೀರು ಸಮುದ್ರ ಸೇರಿ ಪೋಲಾಗುವುದನ್ನು ತಪ್ಪಿಸಿದ ಪೆನ್ನಿಕುಕ್ ರಾಮನಾಡದ ಅರಸು ಹಾಗೂ ಮದ್ರಾಸಿನ ಬ್ರಿಟಿಷ್ ಪ್ರೆಸಿಡೆನ್ಸಿ ದುಬಾರಿ ಯೋಜನೆಯೆಂದು ಕೈಬಿಟ್ಟಮೇಲೂ ತನ್ನ ಸ್ವಂತ ಮನೆ ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹತ್ತುವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಬರಪೀಡಿತವಾಗಿದ್ದ ಥೇಣಿ, ಮಧುರೈ, ಶಿವಗಂಗಾ ಹಾಗೂ ರಾಮನಾಥಪುರಂ ಜಿಲ್ಲೆಗಳಿಗೆ ಜೀವ ಹರಿಸಿದ. ಈ ಯೋಜನೆಯಿಂದ ಕಳೆದ ೧೧೬ ವರ್ಷಗಳಿಂದ ಅಲ್ಲಿನ ಪರಿಸರಕ್ಕೆ, ಬಹುವೈವಿಧ್ಯತೆಯ ಜೀವರಾಶಿಗೆ, ಸಮುದ್ರದ ಉಪ್ಪಿನಾಂಶದ ಏರಿಳಿತಕ್ಕೆ, ಮೀನುಗಾರರಿಗೆ ಯಾವ ಪ್ರಮಾಣದ ತೊಂದರೆಗಳಾಗಿವೆ ಎಂಬುದನ್ನು ಕೂಡ ಅರಿತೇ ನಾವು ಮುಂದಿನ ಹೆಜ್ಜೆ ಇಡಬಹುದೆಂಬುದು ಮಧು ಅವರ ಅಭಿಪ್ರಾಯವಾಗಿದೆ. ಈ ಯೋಜನೆಯಿಂದ ಪರಿಸರಕ್ಕಾಗುವ ಹಾನಿಯ ಹತ್ತುಪಟ್ಟು ಪರಿಸರ ಸಮತೋಲನದ ಕೆಲಸ ಬರಪೀಡಿತ ಪ್ರದೇಶಗಳಲ್ಲಿ ಆಗುವುದರ ಜೊತೆಗೆ ಲಕ್ಷಾಂತರ ಜನರ ಬದುಕೂ ಹಸನಾಗುವುದಾದಲ್ಲಿ ಇದನ್ನು ಯಾಕೆ ವಿರೋಧಿಸಬೇಕೆಂಬುದು ಮಧು ಅವರ ಅಭಿಮತವಾಗಿದೆ. ಮಧು ಅವರ ಜಲಚಿಂತನೆಗಳು ಕೇವಲ ನೇತ್ರಾವತಿ ಸುತ್ತಲೇ ಗಿರಕಿ ಹೊಡೆದಿಲ್ಲ. ಬದಲಿಗೆ ಚೀನಾದ ಪಿತೂರಿಗೆ ಬಲಿಯಾಗುತ್ತಿರುವ ಬ್ರಹ್ಮಪುತ್ರಾದಿಂದ ಹಿಡಿದು ಕಾವೇರಿ, ಕೃಷ್ಣ, ಗುಂಡ್ಯಾ ಜಲ ವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ, ಬೆಂಗಳೂರಿನ ನೀರಿನ ಸಮಸ್ಯೆ, ರಾಷ್ಟ್ರೀಯ ನದೀ ಜೋಡಣೆ, ಆಹಾರ ಸುರಕ್ಷತೆ, ಕೋಲಾರದಲ್ಲಿ ಪತ್ತೆಯಾಗಿರುವ ಯುರೇನಿಯಂವರೆಗೂ ಹಬ್ಬಿದೆ. ಆದರೂ ಇಡೀ ಪುಸ್ತಕ ಬಯಲು ಸೀಮೆಗೆ ನೀರುಣಿಸಿ ಜೀವ ನೀಡುವುದರತ್ತಲೇ ಹೆಚ್ಚು ಕೇಂದ್ರೀಕೃತಗೊಂಡಿರುವುದು ಇಲ್ಲಿನ ವಿಶೇಷ. ಇಲ್ಲಿನ ಲೇಖನಗಳೆಲ್ಲವೂ ಕನ್ನಡದ ದಿನಪತ್ರಿಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟಿತಗೊಂಡಂಥವು. ಹಾಗಾಗಿ ಅಂಕಣ ಬರವಣಿಗೆಯ ಮಿತಿಗಳೂ ಇಲ್ಲಿವೆ. ಉದಾಹರಣೆಗೆ ಅನೇಕ ಅಂಶಗಳು ಪುನರಾವರ್ತಿತವಾದಂತೆ ತೋರುತ್ತವೆಯಾದರೂ ಅವು ಆಯಾ ಸಂದರ್ಭದ ಅಗತ್ಯದ ಹಿನ್ನೆಲೆಯಲ್ಲಿ ಪದೇ ಪದೇ ಪ್ರಸ್ತಾಪಿತಗೊಂಡಿರಬಹುದು. ಆದರೂ ನೀರಿನ ಕುರಿತ ವಿಚಾರಗಳನೇಕವನ್ನು ಕುತೂಹಲಕರವಾಗಿ ಮಂಡಿಸುವಾಗ ಅವು ಅಂತಹ ದೊಡ್ಡ ತೊಡಕೇನಲ್ಲವೆನಿಸುತ್ತದೆ. ಹಾಗೆ ನೋಡಿದರೆ ಇಡೀ ಪುಸ್ತಕವನ್ನು ಸಾವಧಾನದಿಂದ ಪುನರ್ ಸಂಪಾದಿಸುವ ಸಾಧ್ಯತೆಗಳೂ ಇದ್ದೇ ಇದ್ದವಾದರೂ ಕಣ್ಣೆದುರಿಗೇ ಹತ್ತಿ ಉರಿಯುವ ಸಮಸ್ಯೆಗಳ ಕುರಿತಂತೆ ಬರಹದ ಮೂಲಕ ಜನರನ್ನು ಜಾಗ್ರತಗೊಳಿಸುವ ತುರ್ತಲ್ಲಿ ಇಂತಹ ಲೋಪಗಳು ನನ್ನ ಮಟ್ಟಿಗಂತೂ ಕ್ಷಮ್ಯ ಎನಿಸುತ್ತದೆ. ಭಾಷೆಯ ಮೂಲಕದ ಪರಿಶೀಲನೆ, ಸಾಹಿತ್ಯಕ ಮೌಲ್ಯಗಳಿಗಿಂತಲೂ ವಿಚಾರಗಳೇ ಮುಖ್ಯವೆಂಬುದು ಇಲ್ಲಿನ ಲೇಖನಗಳ ಧೋರಣೆ.
ಮಧು ಎಂದಿನಿಂದ ಬರಹಗಾರರಾದರೆಂಬುದೇ ನನ್ನ ಮಟ್ಟಿಗೆ ಸೋಜಿಗದ ಸಂಗತಿ. ನಾನು ನಂಬಿರುವಂತೆ ಮೂಲಭೂತ ಅಗತ್ಯತೆಗಳಲ್ಲೊಂದಾದ ನೀರಿನ ಹೋರಾಟವೇ ಮಧು ಅವರಲ್ಲಿನ ಲೇಖಕನನ್ನು ಹೊರತಂದಿದೆ. ಇದು ನೀರಿನ ಶಕ್ತಿಯೂ ಆಗಿರುವಂತೆ ಮಧುವಿನ ಸಂಖ್ಯಾಬಲವೂ ಆಗಿರಬಲ್ಲದು. ಬಯಲು ಸೀಮೆಗೆ ನೀರು ತರಲೇಬೇಕೆಂಬ ಹಠತೊಟ್ಟಿರುವ ಮಧು ನನ್ನ ಕಣ್ಣಿಗೆ ಮತ್ತೊಬ್ಬ ಜಾನ್ ಪೆನ್ನಿಕುಕ್‌ನಂತೆಯೇ ಕಾಣಿಸುತ್ತಿದ್ದಾರೆ. ಸಾವಿರಾರು ಮೈಲಿಗಳಾಚೆಯ ಲಂಡನ್‌ನಿಂದಲೇ ತಮ್ಮ ಬರಪೀಡಿತ ತಾಯ್ನೆಲದ ಜಲದಾಹದತ್ತ ಚಿಕಿತ್ಸಕ ದೃಷ್ಟಿ ಹರಿಸಿರುವ ಮಧು ಜಲನೇತ್ರತಜ್ಞರಂತೆಯೂ, ಆಧುನಿಕ ಭಗೀರಥನಂತೆಯೂ ಕಠಿಣ ತಪದ ಹಾದಿಗಿಳಿದಂತಿದೆ. ಬಯಲು ಸೀಮೆಯ ಜಲಾಂದೋಲನಕ್ಕೆ ಕ್ರಮೇಣ ತೀವ್ರತೆಯನ್ನು ತಂದುಕೊಡುತ್ತಿರುವ ಹೋರಾಟಕ್ಕೆ ಗಟ್ಟಿ ಬುನಾದಿಯ ತಾತ್ವಿಕ ಆಯಾಮ ಕಲ್ಪಿಸುತ್ತಿರುವ ಮಧು ಅವರ ನೀರ ಹೋರಾಟ ಫಲಪ್ರದವಾಗಲೆಂದು ಎದೆ ತುಂಬಿ ಹಾರೈಸುತ್ತೇನಲ್ಲದೆ ಶಕ್ತಿಮೀರಿ ಅವರೊಂದಿಗೆ ಹೆಜ್ಜೆ ಹರಿಸಲೂ ಪ್ರಯತ್ನಿಸುತ್ತೇನೆ.

ಲಕ್ಷ್ಮೀಪತಿ ಕೋಲಾರ

ಜಾನ್ ಪೆನ್ನಿಕುಕ್‌ ಮತ್ತು ಮುಳ್ಳಪೆರಿಯಾರ್ ಆಣೆಕಟ್ಟು

ಜಾನ್ ಪೆನ್ನಿಕುಕ್‌ ಮತ್ತು ಮುಳ್ಳಪೆರಿಯಾರ್ ಆಣೆಕಟ್ಟು

ಡಾ.ಮಧು ಸೀತಪ್ಪನವರ `ಬಯಲುಸೀಮೆಯ ಬಾಯಾರಿಕೆ ಹಿಂಗೀತೆ?' ಕೃತಿಯಲ್ಲಿನ ಒಂದು ಲೇಖನ


ಮಧು ಸೀತಪ್ಪ
ಬ್ರಿಟಿಷರೇ ನಮ್ಮ ದೇಶ ಬಿಟ್ಟು ತೊಲಗಿ ಎಂದು ಸ್ವಾತಂತ್ರ್ಯ ಚಳುವಳಿ ಮಾಡಿದ ಭಾರತೀಯರು ಬ್ರಿಟಿಷನೊಬ್ಬನನ್ನು ದೇವರೆಂದು ಪೂಜಿಸಲು ಸಾಧ್ಯವೆ. ಅವನ ದೇವಾಲಯವನ್ನು ಸ್ಥಾಪಿಸಿರುವುದಲ್ಲದೆ, ಆತನ ಫೋಟೊವನ್ನು ತಮ್ಮ ಮನೆಗಳ ದೇವರಮನೆಯಲ್ಲಿ ತೂಗಿ ಹಾಕಿ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತನ ಹೆಸರನ್ನು ಈಗಲೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾಮಕರಣ ಮಾಡುತ್ತಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಇದು ಸತ್ಯವೇ? ಯಾರೀ ವ್ಯಕ್ತಿ? ಬನ್ನಿ ೧೯ನೇ ಶತಮಾನದ ಇತಿಹಾಸದ ಪುಟಗಳನ್ನು ತಿರುವಿ ನೋಡೋಣ. ೧೭೮೯ ರಲ್ಲಿ ರಾಮನಾಡ ರಾಜ್ಯದ ಪ್ರಧಾನಮಂತ್ರಿ ಮುತ್ತಿರುಲಪ್ಪ ಪಿಲ್ಲೈ ಪಶ್ಚಿಮಾಭಿಮುಖವಾಗಿ ಹರಿಯುವ ಪೆರಿಯಾರ್ ನದಿಯನ್ನು ಪಶ್ಚಿಮಘಟ್ಟಗಳಲ್ಲಿ ಸುರಂಗಮಾಡಿ ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಣೆ ಮಾಡಿ ಬರಪೀಡಿತ ಥೇಣಿ, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ನೀರು ಹರಿಸುವ ಬಗ್ಗೆ ಮಹಾರಾಜ ಮುತ್ತುರ ಮಾಲಿಂಗ ಸೇತುಪತಿಯ ಮುಂದೆ ಪ್ರಸ್ತಾಪವನ್ನಿಟ್ಟ. ಆದರೆ ಮಹಾರಾಜ ಇದು ತುಂಬಾ ದುಂದು ವೆಚ್ಚದ ಯೋಜನೆ ಹಾಗು ಪಶ್ಚಿಮ ಘಟ್ಟಗಳ ಬೆಟ್ಟ ಗುಡ್ಡಗಳಲ್ಲಿ ಈ ಯೋಜನೆ ಕೈಗೊಳ್ಳಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದು ಯೋಜನೆಯನ್ನು ಕೈಬಿಟ್ಟರು. ೧೮೬೫ರಲ್ಲಿ ಮದ್ರಾಸ್ ಪ್ರ್ರೆಸಿಡೆನ್ಸಿಯ ಬ್ರಿಟಿಷರು ಈ ಬರಪೀಡಿತ ಜಿಲ್ಲೆಗಳ ಧಾರುಣ ಪರಿಸ್ಥಿತಿಯನ್ನು ನೋಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದರ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಮುಖ್ಯ ಅಭಿಯಂತರರಾದ ಜಾನ್ ಪೆನ್ನಿಕುಕ್‌ರವರಿಗೆ ವಹಿಸಿದರು. ಸುಮಾರು ಹತ್ತು ವರ್ಷಗಳು ಸಾಧಕ ಭಾಧಕಗಳು ಚರ್ಚೆಯಾಗಿ ಇದು ದುಬಾರಿ ಯೋಜನೆ ಹಾಗು ಪಶ್ಚಿಮಘಟ್ಟಗಳಂತಹ ಬೆಟ್ಟಗಳಲ್ಲಿ ಅಣೆಕಟ್ಟು ಕಟ್ಟುವುದು ಅಸಾಧ್ಯವೇ ಸರಿ ಎಂಬ ನಿರ್ಣಯಕ್ಕೆ ಬರಲಾಯಿತು. ಆದರೆ ಇಂತಹ ಮಿಷನ್ ಇಂಪಾಸಿಬಲ್ ಅನ್ನು, ಪಾಸಿಬಲ್ ಮಾಡಿದ ಕೀರ್ತಿ ಜಾನ್ ಪೆನ್ನಿಕುಕ್‌ಗೆ ಸೇರಬೇಕು. ೧೮೭೭ರಲ್ಲಿ ಈ ಯೋಜನೆಯ ವೆಚ್ಚ ಸುಮಾರು ೧ ಕೋಟಿರೂಗಳೆಂದು ಅಂದಾಜು ಮಾಡಲಾಯಿತು. ಆದರೆ ಇದು ದುಬಾರಿ ಯೋಜನೆಯೆಂದು ಮದ್ರಾಸ್ ಪ್ರೆಸಿಡೆನ್ಸಿಯ ಅಕ್ಷೇಪಣೆ ಎತ್ತಿತು. ಇದಕ್ಕೆ ಜಾನ್ ಪೆನ್ನಿಕುಕ್ ಈ ಪ್ರದೇಶಗಳ ಜನರಿಗೆ ನೀರು ಅತ್ಯವಶ್ಯಕ, ಆದುದರಿಂದ ಸಂಬಳವಿಲ್ಲದೆ ಅಥವಾ ಕಡಿಮೆ ಸಂಬಳಕ್ಕೆ ಕೂಲಿ ಕಾರ್ಮಿಕರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ, ಆದುದರಿಂದ ಯೋಜನಾ ವೆಚ್ಚ ಶೇ.೧೦% ಕಡಿಮೆಯಾಗುತ್ತದೆ ಎಂಬ ಹೊಸ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟ. ಹೊಸ ಪ್ರಸ್ತಾವನೆಗೆ ಸರ್ಕಾರದಿಂದ ಕೂಡಲೆ ಒಪ್ಪಿಗೆ ದೊರೆಯಿತು.
ಜಾನ್ ಪೆನ್ನಿಕುಕ್

ಪೆರಿಯಾರ್ ನದಿ ನಮ್ಮ ರಾಜ್ಯದ ನೇತ್ರಾವತಿಯಂತೆ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಅರಬ್ಬಿಸಮುದ್ರಕ್ಕೆ ಸೇರುತ್ತದೆ. ವೇಗೈ ನದಿ ನಮ್ಮ ರಾಜ್ಯದ ಹೇಮಾವತಿ ನದಿಯಂತೆ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಪಶ್ಚಿಮಘಟ್ಟಗಳಲ್ಲಿ ಮಳೆಗಾಲದಲ್ಲಿ ಸರಾಸರಿ ೫೦೦೦ ಮಿ.ಮೀ. ಮಳೆಯಾಗುವುದರಿಂದ ಯತೇಚ್ಛ ನೀರು ಮಳೆಗಾಲದಲ್ಲಿ ಅರಬ್ಬಿ ಸಮುದ್ರದ ಪಾಲಾಗುತ್ತಿತ್ತು. ಮಳೆಗಾಲದಲ್ಲಾಗುವ ಹೆಚ್ಚುವರಿ ನೀರನ್ನು ತೇಕಡಿ ಅರಣ್ಯ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಿ, ಈ ತೇಕಡಿ ಸರೋವರದ ನೀರನ್ನು ಪಶ್ಚಿಮಘಟ್ಟಗಳಲ್ಲಿ ೨ ಕಿ.ಮೀ. ಉದ್ದದ ಸುರಂಗವನ್ನು ಕೊರೆದು ಪೂರ್ವಾಭಿಮುಖವಾಗಿ ಹರಿಯುವ ವೇಗೈ ನದಿಗೆ ಜೋಡಿಸಿ ಬರಪೀಡಿತ ಮಧುರೈ ಹಾಗು ಇತರ ಮೂರು ಜಿಲ್ಲೆಗಳಿಗೆ ಹರಿಸಿವುದೇ ಪೆನ್ನಿಕುಕ್‌ನ ಮುಖ್ಯ ಉದ್ದೇಶ. ಪೆರಿಯಾರ್ ನದಿ ಹಾಗು ತೇಕಡಿ ಕೇರಳದ ತಂಜಾವೂರು ರಾಜ್ಯದ ಅಧೀನದಲ್ಲಿ ಇದ್ದುದ್ದರಿಂದ ಬ್ರಿಟಿಷ್ ಪ್ರೆಸಿಡೆನ್ಸಿ ೯೯೯ ವರ್ಷಗಳ ಲೀಸ್‌ನಂತೆ ೮೦೦೦ ಎಕರೆ ತೇಕಡಿ ಅರಣ್ಯ ಪ್ರದೇಶವನ್ನು ಹಾಗು ಮುಳ್ಳಪೆರಿಯಾರ್ ಅಣೆಕಟ್ಟು ಕಟ್ಟಲು ಅನುಮತಿಯನ್ನು ತಂಜಾವೂರು ಮಹಾರಾಜರಿಂದ ಪಡೆಯಿತು. ಇತ್ತೀಚೆಗೆ ಕೇರಳ ಹಾಗು ತಮಿಳುನಾಡಿನ ನಡುವೆ ಈ ಅಣೆಕಟ್ಟು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ಮಧುರೈನ ಪಿ.ಡಬ್ಲ್ಯೂ.ಡಿ. ಕಚೇರಿಯ ಆವರಣದಲ್ಲಿರುವ ಜಾನ್ ಪೆನ್ನಿಕುಕ್ ಪುತ್ಥಳಿ

೧೮೮೫ರಲ್ಲಿ ಕೆಲಸ ಪ್ರಾರಂಭಿಸಿದ ಪೆನ್ನಿಕುಕ್‌ನ ಮುಂದೆ ‘ಮಿಷನ್ ಇಂಪಾಸಿಬಲ್’ ಯೋಜನೆಯನ್ನು ‘ಪಾಸಿಬಲ್’ ಮಾಡುವ ಹಟವಿತ್ತು. ಅಂದು ಸಿಮೆಂಟಿರಲಿಲ್ಲ. ಈ ಅಣೆಕಟ್ಟನ್ನು ಸುಣ್ಣದ ಕಲ್ಲು, ಸುರ್ಕಿ ಹಾಗು ಮರಳು ಮಿಶ್ರಿತ ಪುಡಿಯನ್ನು ಬಳಸಿ ಕಟ್ಟಲಾಗಿದೆ. ೮೦,೦೦೦ ಟನ್ ಸುಣ್ಣದ ಕಲ್ಲನ್ನು ಪಶ್ಚಿಮಘಟ್ಟಗಳ ಪ್ರದೇಶಕ್ಕೆ ಎತ್ತಿನ ಬಂಡಿಗಳಲ್ಲಿ ಹಾಗೂ ಹಗ್ಗಗಳ ಮೂಲಕ ಸಾಗಿಸಲಾಯಿತು. ಮಳೆಗಾಲದ ೪ ತಿಂಗಳು ಕೆಲಸಮಾಡಲಾಗುತ್ತಿರಲಿಲ್ಲ. ಮಲೇರಿಯಾ ಬೇನೆ ಈ ಪ್ರದೇಶಗಳಲ್ಲಿ ವ್ಯಾಪಕವಾಗಿತ್ತು. ಆಗ ಮಲೇರಿಯಾಕ್ಕೆ ಔಷಧವಿರಲಿಲ್ಲ. ಆದರೆ ಪಶ್ಚಿಮಘಟ್ಟಗಳಲ್ಲಿ ದೊರೆಯುವ ಭಟ್ಟಿ, ಸಾರಾಯಿಯೇ ಇದಕ್ಕೆ ಮದ್ದು. ಮಲೇರಿಯಾದಿಂದ ೪೩೯ ಜನ ಮೃತಪಟ್ಟರು, ಇದರಲ್ಲಿ ಅನೇಕ ಬ್ರಿಟಿಷ್ ಅಧಿಕಾರಿಗಳು ಸೇರಿದ್ದಾರೆ. ಸ್ಥಳೀಯ ಭಟ್ಟಿ ಸಾರಾಯಿಲ್ಲದಿದ್ದಲ್ಲಿ ಈ ಅಣೆಕಟ್ಟನ್ನು ಕಟ್ಟಲೇ ಸಾಧ್ಯವಿರುತ್ತಿರಲಿಲ್ಲ ಎಂದು ಚರಿತ್ರ ಸಂಶೋಧಕರು ದಾಖಲಿಸಿದ್ದಾರೆ.
ಅಣೆಕಟ್ಟಿನ ಅಡಿಪಾಯ ಕಟ್ಟುವ ಮೊದಲ ಹಂತದಲ್ಲೇತೀವ್ರ ಮಳೆಯಿಂದ ಎರಡುಬಾರಿ ಕೊಚ್ಚಿ ಹೋಯಿತು. ಈ ಘಟನೆಗಳು ಸಂಭವಿಸಿದ ಮೇಲೆ ಮದ್ರಾಸ್ ಪ್ರೆಸಿಡೆನ್ಸಿ ಈ ದುಬಾರಿ ಯೋಜನೆಯನ್ನು ಕೈಬಿಡಲು ನಿರ್ಧರಿಸಿತು. ಪೆನ್ನಿಕುಕ್‌ಗೆ ಈ ಪ್ರಪಂಚದಲ್ಲಿ ಹುಟ್ಟಿದ ಮೇಲೆ ಈ ‘ಮ್ಯಾನ್‌ಕೈಂಡ್‌ಗೆ’ ನಾವು ಏನೂ ಮಾಡಲಿಲ್ಲವೆಂದರೆ, ಬದುಕಿ ಏನು ಪ್ರಯೋಜನಾ? ಎಂಬುದು ಮನಸ್ಸಿನಲ್ಲೇ ಕೊರಗುತ್ತಿತ್ತು. ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಪೆನ್ನಿಕುಕ್ ತನ್ನ ಸ್ವಂತ ಮನೆಯನ್ನು ಹಾಗೂ ಹೆಂಡತಿಯ ಒಡವೆಗಳನ್ನು ಮಾರಿ ಹಣ ಸಂಗ್ರಹಿಸಿದ.

ಮುಳ್ಳಪೆರಿಯಾರ್ ಆಣೆಕಟ್ಟು

ಆ ಹಣದೊಂದಿಗೆ ಭಾರತಕ್ಕೆ ಹಿಂದಿರುಗಿದ ಪೆನ್ನಿಕುಕ್ ನೆನೆಗುದಿಗೆ ಬಿದ್ದಿದ್ದ ಮುಳ್ಳಪೆರಿಯಾರ್ ಯೋಜನೆಯನ್ನು ಪುನರಾರಂಭಿಸಿದ. ಇಷ್ಟೆಲ್ಲ ತೊಡಕುಗಳಿದ್ದರೂ ೧೮೮೫ರಲ್ಲಿ ಪ್ರಾರಂಭವಾದ ಕಾಮಗಾರಿ ಕೇವಲ ಹತ್ತು ವರ್ಷಗಳಲ್ಲಿ ಪೂರ್ಣಗೊಂಡಿತ್ತು. ಪ್ರಪಂಚದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಕಾರ್ಯಗತವಾದ ಪಶ್ಚಿಮ-ಪೂರ್ವ ನದಿಜೋಡಣೆ ಯೋಜನೆಯೆಂದು ಹೆಗ್ಗಳಿಕೆಗೆ ಪಾತ್ರವಾಯಿತು. ‘ಮಿಷನ್ ಇಂಪಾಸಿಬಲ್’ಗೆ ‘ಹ್ಯಾಪಿ ಎಂಡಿಂಗ್’ ನೀಡಿದ ಪೆನ್ನಿಕುಕ್ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಲ್ಲಿ ಆರಾಧ್ಯ ಧೈವವಾದ.
ಅಂದು ಪೆನ್ನಿಕುಕ್ ತನ್ನ ಪತ್ನಿಯ ಒಡವೆ ಮಾರಿ ಯೋಜನೆಯನ್ನು ಮುಂದುವರೆಸಿದ, ಆದರೆ ಇಂದು ಕೆಲವು ಅಭಿಯಂತರರು ಲೋಕಾಯಕ್ತಕ್ಕೆ ಕಾಣದಿರುವ ರೀತಿ ಒಡವೆಗಳನ್ನು ಎಲ್ಲಿ ಬಚ್ಚಿಡುವುದು ಎಂದು ಸದಾ ಯೋಚಿಸುತ್ತಿರುತ್ತಾರೆ. ಮುಖ್ಯಮಂತ್ರಿಗಳೇ, ನಾವು ನಿಮ್ಮ ಒಡವೆ ಅಥವಾ ಮನೆ ಮಾರಿ ಅಂತ ಕೇಳ್ತಾ ಇಲ್ಲ. ಬರಪೀಡಿತ ಜಿಲ್ಲೆಗಳಿಗಾಗಿರುವ ನೀರಿನ ಅಸಮತೋಲನವನ್ನು ಸರಿಪಡಿಸಲು ಇರುವ ಒಂದೇ ಮಾರ್ಗವಾದ ನೇತ್ರಾವತಿ ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಕೇಳುತ್ತಿದ್ದೇವೆ. ನೀವು ತಿಪಟೂರಿನಲ್ಲಿ ಭಾಷಣ ಮಾಡಿ, ‘ನಾನು ನೇತ್ರಾವತಿ ಯೋಜನೆಗೆ ಬದ್ಧ’ ಎಂದು ಹೇಳಿದ ಮರುದಿನವೇ ಶಿವಮೊಗ್ಗದಲ್ಲಿ, ‘ನಾನು ಆ ರೀತಿ ಹೇಳಿಯೇ ಇಲ್ಲ, ಪತ್ರಿಕೆಗಳಲ್ಲಿ ತಪ್ಪು ವರದಿಯಾಗಿರುವುದರಿಂದ ನನ್ನ ಮನಸ್ಸಿಗೆ ನೋವಾಗಿದೆ’ ಎಂಬ ಹೇಳಿಕೆ ನೀಡಿದ್ದೀರಾ. ನಿಮ್ಮ ಹೇಳಿಕೆಯನ್ನು ಅಲ್ಲಿಗೇ ನಿಲ್ಲಿಸಿದ್ದರೆ ಚೆನ್ನಾಗಿತ್ತು ಆದರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಾನು ನೇತ್ರಾವತಿ ಯೋಜನೆಗೆ ಹಿಂದೆಯೂ ವಿರೋಧಿ ಹಾಗು ಈಗಲೂ ವಿರೋಧಿ’ ಎಂದು ಹೇಳಿರುವುದು ದುರುದೃಷ್ಟಕರ. ಕುಡಿಯಲು ಶುದ್ಧ ನೀರಿಲ್ಲದೆ ಬರಪೀಡಿತ ಜಿಲ್ಲೆಗಳಲ್ಲಿ ಹಸುಗೂಸುಗಳು ಮತ್ತು ಮಕ್ಕಳು ಅಂಗವಿಕಲರಾಗುತ್ತಿರುವಾಗ ಈ ರೀತಿಯ ಸಂವೇದನಾರಹಿತ ಹೇಳಿಕೆಗಳು ಮುಖ್ಯಮಂತ್ರಿಗಳ ಪದವಿಗೆ ಘನತೆ ತರುವುದಿಲ್ಲ. ನೀವು ದಕ್ಷಿಣ ಕನ್ನಡ ಹಾಗೂ ತುಳುನಾಡಿಗೆ ಮಾತ್ರ ಮುಖ್ಯಮಂತ್ರಿಗಳೋ ಅಥವಾ ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳೋ ಎಂಬ ಸಂದೇಹ ಕಂಡು ಬರುತ್ತಿದೆ. ನಿಮಗೆ ಮೊದಲಿನಿಂದಲೂ ಈ ಯೋಜನೆಗೆ ವಿರೋಧವಿದ್ದರೆ ಬಹುಶಃ ಪರಿಸರಕ್ಕಾಗುವ ಹಾನಿ, ನೀರಿನಲ್ಲಿ ಹೆಚ್ಚಾಗುವ ಉಪ್ಪಿನಾಂಶ, ಪಶಿಮಘಟ್ಟಗಳ ಬಹುವೈವಿಧ್ಯತೆಯ ಜೀವರಾಶಿಗಾಗುವ ಹಾನಿ, ಕರಾವಳಿಯ ಮೀನುಗಾರರಿಗಾಗುವ ತೊಂದರೆಗಳ ಭೀತಿ ನಿಮ್ಮನ್ನು ಕಾಡುತ್ತಿರಬಹುದು. ೧೧೬ ವರ್ಷಗಳ ಹಿಂದೆ ನೇತ್ರಾವತಿಯ ಯೋಜನೆಯಂತೆ ಪಶ್ಚಿಮಕ್ಕೆ ಹರಿಯುವ ಪೆರಿಯಾರ್ ನದಿಯ ಮಳೆಗಾಲದ ಹೆಚ್ಚುವರಿಯ ನೀರನ್ನು ಪೂರ್ವದ ವೇಗೈ ನದಿಗೆ ಜೋಡಿಸಿರುವ ಜೀವಂತ ಉದಾಹರಣೆ ಕೇರಳದ ಮುಳ್ಳಪೆರಿಯಾರ್ ಅಣೆಕಟ್ಟು. ೧೧೬ ವರ್ಷಗಳಿಂದ ಪರಿಸರಕ್ಕೆ ಅಥವಾ ಬಹುವೈವಿಧ್ಯತೆಯ ಜೀವರಾಶಿಗೆ ಅಥವಾ ನದಿಯ/ಅರಬ್ಬಿ ಸಮುದ್ರದ ಉಪ್ಪಿನಾಂಶಕ್ಕೆ ಅಥವಾ ಮೀನುಗಾರರಿಗೆ ಯಾವ ರೀತಿಯ ತೊಂದರೆಗಳಾಗಿದೆ ಎಂದು ಅರಿಯಲು ಇದು ಒಂದು ಜೀವಂತ ನಿದರ್ಶನ. ಪೆರಿಯಾರ್ ಯೋಜನೆಗೆ ೮೦೦೦ ಎಕರೆ ಅರಣ್ಯ ಪ್ರದೇಶ ಹಾಗು ಪಶ್ಚಿಮಘಟ್ಟಗಳ ಹೊಟ್ಟೆಯನ್ನು ಬಗೆದು ೨ ಕಿ.ಮೀ. ಸುರಂಗ ಕೊರೆಯಲಾಯಿತು. ಆದರೆ ಸರ್ಕಾರದ ಮುಂದಿರುವ ನೇತ್ರಾವತಿಯ ಯೋಜನೆಗೆ ಕೇವಲ ೫೦೦ ಎಕರೆಗಳು ಸಾಕು ಹಾಗೂ ಪಶ್ಚಿಮ ಘಟ್ಟಗಳ ಹೊಟ್ಟೆಯನ್ನು ಬಗೆಯುವಂತಿಲ್ಲ. ಮುಖ್ಯಮಂತ್ರಿಯ ಸ್ಥಾನದಲ್ಲಿರುವ ನೀವು ಯಾವುದೋ ಸ್ವಾಮಿಗಳ ಅಥವಾ ಧರ್ಮಾಧಿಕಾರಿಗಳ ಒತ್ತಡಕ್ಕೊ ಮಣಿದು ನಿಮ್ಮ ಹೇಳಿಕೆಯನ್ನೇ ತಿರುಚಿರುವುದು ವಿಷಾದಕರ. ಕೆಲವು ತಿಂಗಳುಗಳಿಂದ ನಿಮ್ಮ ಕುರ್ಚಿ ಒಂದೇ ಸಮನೆ ಅಲ್ಲಾಡಿ ತುಂಬಾ ಮೈ ಕೈ ನೋವಾಗಿದ್ದರೆ ನಿಮ್ಮ ಕುಟುಂಬ ಸಮೇತ ತೇಕಡಿ ಅರಣ್ಯ ಧಾಮಕ್ಕೆ ಹೋಗಿ ಬನ್ನಿ. ವಿಶ್ರಾಂತಿಯೊಂದಿಗೆ, ಮುಳ್ಳಪೆರಿಯಾರ್ ಯೋಜನೆಯನ್ನು ನೋಡಿದಂತಾಗುತ್ತದೆ.
ಡಾ.ಮಧು ಸೀತಪ್ಪ
madhuseethappa@yahoo.com

Monday, September 20, 2010

ನರೇಗ ಬದಲು ಫೀಡ್ ಎಂಬ ಕಾರ್ಯಕ್ರಮ ಜಾರಿಗೆ ತನ್ನಿ


18-09-2010ರ `ಸಂಯುಕ್ತ ಕರ್ನಾಟಕ'ದಲ್ಲಿ ನನ್ನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.
ನರೇಗ ಬದಲು ಫೀಡ್ ಎಂಬ ಕಾರ್ಯಕ್ರಮ ಜಾರಿಗೆ ತನ್ನಿ
ಡಾ.ಮಧುಸೀತಪ್ಪ

ಪರಿಸರ ವಿಜ್ಞಾನಿಗಳ ಪ್ರಕಾರ ಇಂಗಾಲದ ಡೈ ಆಕ್ಸೈಡ್ ಹಾಗೂ ಹಸಿರು ಮನೆ ಅನಿಲಗಳು ತಡೆಯಿಲ್ಲದೆ ಹೆಚ್ಚುವರಿಯಾದರೆ ಧೀರ್ಘಾವದಿ ಸರಾಸರಿ ಜಾಗತಿಕ ತಾಪಮಾನ ೧೪ಲಿ ಸೆ.ನಿಂದ ೨೦೯೯ರ ವೇಳೆಗೆ ೨೦.೧ಲಿ ಸೆ.ಗೆ ಹೆಚ್ಚಲಿದೆ. ೧೭೯೦ ಹಾಗೂ ೨೦೧೦ರ ಅವಧಿಯಲ್ಲಿ ಪರಿಸರದಲ್ಲಿ ಇಂಗಾಲ ಶೇ. ೩೩ರಷ್ಟು ಹಾಗೂ ಮಿಥೇನ್ ಅನಿಲ ಶೇ. ೧೪೯ರಷ್ಟು ಹೆಚ್ಚಿದೆ. ಹಸಿರು ಮನೆ ಅನಿಲಗಳಲ್ಲಿ ಇಂಗಾಲವಲ್ಲದೆ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಹೈಡ್ರೋಫ್ಲೂರೊ ಕಾರ್ಬನ್ ಅನಿಲಗಳಿವೆ. ಅನಿಯಂತ್ರಿತ ಕೈಗಾರಿಕೆ, ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ವಿದ್ಯುತ್ ಉತ್ಪಾದನೆ, ಹಳೆ ತಂತ್ರಜ್ಞಾನದಿಂದ ನಡೆಯುವ ಕೈಗಾರಿಕೆಗಳಿಂದ ಹಾಗೂ ಸಾರಿಗೆ ವಾಹನಗಳಿಂದ (ವಿಮಾನ ಹಾಗೂ ಹಡಗುಗಳು), ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಅವೈಜ್ಞಾನಿಕ ವ್ಯವಸಾಯದಿಂದ, ಕೊಳಚೆ ನಿರ್ಮೂಲನದಲ್ಲಿರುವ ಅವ್ಯವಸ್ಥೆಯಿಂದ ಹಸಿರು ಮನೆ ಅನಿಲಗಳ ಅಂಶ ಹೆಚ್ಚುತ್ತಿದೆ. ಪರಿಸರದಲ್ಲಿರುವ ಶೇ. ೮೦ರಷ್ಟು ಇಂಗಾಲ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದರೆ ಇನ್ನು ಶೇ. ೨೦ರಷ್ಟು ಅರಣ್ಯ ನಾಶದಿಂದ ಸೇರುತ್ತಿದೆ. ಪರಿಸರದಲ್ಲಿ ಶೇಖರವಾಗುವ ಈ ಅನಿಲಗಳು ಇನ್‌ಫ್ರಾರೆಡ್ ಕಿರಣಗಳನ್ನು ಭೂಮಿಯಲ್ಲಿ ಹಿಡಿದಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಏರುವುದಲ್ಲದೆ, ಹಿಮಗಲ್ಲುಗಳು ಕರಗಿ ಬರಗಾಲ ಹಾಗು ಪ್ರವಾಹಗಳು ಸಂಭವಿಸಲಿವೆ. ಮಾರ್ಚ ೨೦೧೦ರ ಜಾಗತಿಕ ತಾಪಮಾನ ೧೪.೫೪ ಡಿಗ್ರಿ ಸೆ., ಅಂದರೆ ಕಳೆದ ೧೩೦ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳು ಎಂದು ದಾಖಲೆ ಮಾಡಿದೆ. ಡಿಸೆಂಬರ್ ೨೦೦೯ರ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಜಾಗತಿಕ ತಾಪಮಾನ ೨೦೯೯ರ ವೇಳೆಗೆ ೨ ಡಿಗ್ರಿ ಸೆ.ಗಿಂತ ಹೆಚ್ಚಾಗದೆ ಇರುವಂತೆ ನಿರ್ಣಯವನ್ನು ಅಂಗೀಕರಿಸಿತು. ವಿಮರ್ಶಕರ ಪ್ರಕಾರ ಈ ಸಮಾವೇಶ ಅಮೆರಿಕ ಹಾಗೂ ಚೀನಾ ದೇಶಗಳ ಸಂಕುಚಿತ ಮನೋಭಾವದಿಂದ ಪರಿಸರಕ್ಕೆ ಧಕ್ಕೆ ತರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ವಿಫಲವಾದರೂ, ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳು ಈ ಅನಿಲಗಳನ್ನು ನಿಯಂತ್ರಿಸುವ ಬಗ್ಗೆ ತಮ್ಮ ದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ.
೫ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೇ.೨೬ರಷ್ಟು ತಗ್ಗಿಸುವುದಾಗಿ ಭಾರತ ಜನವರಿ ೨೦೧೦ರಲ್ಲಿ ವಿಶ್ವಸಂಸ್ಥೆಗೆ ಭರವಸೆ ನೀಡಿದೆ. ಹಾಗಾಗಿ ನಾವು ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ಅನುಸರಿಸಬೇಕಾಗಿದೆ. ಇಂಗಾಲವನ್ನು ನಿಯಂತ್ರಿಸಲು ಇರುವ ವಿಧಾನಗಳೆಂದರೆ ಕಾರ್ಬನ್ ಪ್ರಾಜೆಕ್ಟ್ಸ್, ಕಾರ್ಬನ್ ಕ್ರೆಡಿಟ್ಸ್, ಕಾರ್ಬನ್ ಫಾರ್ಮಿಂಗ್ ಹಾಗು ಕಾರ್ಬನ್ ಟ್ಯಾಕ್ಸಿಂಗ್.

ಕಾರ್ಬನ್ ಪ್ರಾಜೆಕ್ಟ್ಸ್ - ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳಿಂದ ಶೇ.೬೮ರಷ್ಟು ವಿದ್ಯುತ್ ತಯಾರಾಗುತ್ತಿದ್ದರೆ, ಜಲಶಕ್ತಿಯಿಂದ ಶೇ.೨೧, ನವೀಕರಿಸಬಹುದಾದ ಶಕ್ತಿಗಳಿಂದ ಶೇ.೭ ಹಾಗು ಅಣು ಶಕ್ತಿಯಿಂದ ಶೇ.೪ ವಿದ್ಯುತ್ ತಯಾರಿಸಲಾಗುತ್ತಿದೆ. ತಯಾರಾಗುವ ವಿದ್ಯುತ್‌ನಲ್ಲಿ ಶೇ.೩೦ರಿಂದ ಶೇ.೪೫ ವಿದ್ಯುತ್ ಸೋರಿಕೆಯಿಂದ ಅಥವಾ ವಿದ್ಯುತ್ ಕಳ್ಳ ಸಾಗಾಣಿಕೆಯಿಂದ ನಷ್ಟವಾಗುತ್ತಿದೆ. ಪ್ರಸ್ತುತ ೧೪೯,೦೦೦ ಮೆ.ವ್ಯಾ. ವಿದ್ಯುತ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದರೆ ೨೦೩೦ರ ವೇಳೆಗೆ ೯೫೦,೦೦೦ ಮೆ.ವ್ಯಾ. ವಿದ್ಯುತ್ ಅವಶ್ಯಕತೆಯಿದೆ. ಇಂಗಾಲವನ್ನು ಕಡಿಮೆಗೊಳಿಸಬೇಕಾದರೆ ಅಥವಾ ಕಾರ್ಬನ್ ಕ್ರೆಡಿಟ್ ಅಂತಾರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ನಮ್ಮ ದೇಶದ ಪ್ರಗತಿಯನ್ನು ಕಾಯ್ದುಕೊಳ್ಳಲು ನಾವು ಯಥೇಚ್ಛವಾಗಿ ದೊರೆಯುವ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ ಹಾಗೂ ಜೈವಿಕ‌ಇಂಧನಗಳನ್ನು (ಬಯೋಡೀಸೆಲ್) ಬಳಸಿ ಹೆಚ್ಚು ವಿದ್ಯುತ್ ತಯಾರಿಸಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಪ್ರತಿಯೊಂದು ದಾರಿ ದೀಪವನ್ನು ಸೌರಶಕ್ತಿಯಿಂದಲೇ ಉರಿಸಬಹುದು. ಗ್ರಾಮಗಳಲ್ಲಿ ಬಯೋಗ್ಯಾಸನ್ನು ಹಾಗೂ ನಗರಗಳಲ್ಲಿರುವ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲದಿಂದ ವಿದ್ಯುತ್ತನ್ನು ತಯಾರಿಸಬೇಕು. ಅಲ್ಲದೆ ಅಣು ಒಪ್ಪಂದದಂತೆ ಇನ್ನು ೧೦ ವರ್ಷಗಳಲ್ಲಿ ಉತ್ಪಾದಿಸುತ್ತಿರುವ ಅಣುವಿದ್ಯುತ್ತನ್ನು ಶೇ.೧೦ರಿಂದ ಶೇ.೨೦ಕ್ಕೆ ಏರಿಸಬೇಕು. ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ಆದಷ್ಟು ಕಡಿಮೆ ವಿದ್ಯುತ್ತನ್ನು ಉತ್ಪಾದಿಸಬೇಕು. ಜತ್ರೋಪ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಬಯೊಡೀಸಲ್ ತಯಾರಿಸುವುದಲ್ಲದೆ ಕಾರ್ಬನ್ ಕ್ರೆಡಿಟ್ ಸಹ ಪಡೆಯಬಹುದು.
ಕಾರ್ಬನ್ ಕ್ರೆಡಿಟ್ಸ್- ಹಳೆಯ ತಂತ್ರಜ್ಞಾನದಿಂದ ನಡೆಯುತ್ತಿರುವ ಕೈಗಾರಿಕೆಗಳಿಗೆ ಸರ್ಕಾರ ಅನುದಾನ ನೀಡಿ ಅವುಗಳನ್ನು `ಇಂಗಾಲ ಸ್ನೇಹಿ' ಕೈಗಾರಿಕೆಗಳಾಗಿ ಪರಿವರ್ತಿಸಬೇಕು, ಪ್ರತಿ ಕೈಗಾರಿಕೆಗೆ ಇಂಗಾಲದ ಮಿತಿಯನ್ನು ಜಾರಿಗೆ ತರಬೇಕು. ಇದನ್ನು ತಲುಪಲಾರದಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮರಗಳನ್ನು ಬೆಳೆಸುವುದರೊಂದಿಗೆ ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯನ್ನು ನಿಭಾಯಿಸಬೇಕು.

ಕಾರ್ಬನ್ ಟ್ಯಾಕ್ಸಿಂಗ್- ಖಾಸಗಿ ಸಾರಿಗೆ, ಸರ್ಕಾರಿ ಸಾರಿಗೆ, ವಿಮಾನ ಸಾರಿಗೆ ಕಂಪನಿಗಳ ಮೇಲೆ ಇಂಗಾಲ ತೆರಿಗೆಯನ್ನು ವಿಧಿಸಬೇಕು. ಅನಗತ್ಯವಾಗಿ ಹೆಚ್ಚು ಇಂಗಾಲವನ್ನು ಹೊರಸೂಸುವ ಎಲ್ಲ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟುವ ಪ್ರತಿ ಚದರ ಅಡಿಗೆ ಇಂಗಾಲ ತೆರಿಗೆ ವಿಧಿಸಬೇಕು. ನಗರಗಳಲ್ಲಿರುವ ಎಲ್ಲ ಕಛೇರಿಗಳು ಶಕ್ತಿ ಸಮರ್ಥವಾಗಿ (ಎನರ್ಜಿ ಎಫಿಷಿಯೆಂಟ್) ಪರಿವರ್ತನೆಯಾಗಬೇಕು ಇಲ್ಲದಿದ್ದಲ್ಲಿ ಅವು ಇಂಗಾಲ ತೆರಿಗೆಯನ್ನು ಪಾವತಿಮಾಡಬೇಕು.

ಕಾರ್ಬನ್ ಫಾರ್ಮಿಂಗ್- ನಮ್ಮ ದೇಶದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಮಾಡುವಲ್ಲಿ ನಮ್ಮ ರೈತರದು ಮಹತ್ತರ ಪಾತ್ರವಿದೆ. ಪ್ರತಿಯೊಬ್ಬ ರೈತನಿಗೆ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಲು ಸರ್ಕಾರ ಹಣವನ್ನು ಕೊಡಬೇಕು- ಅದು ಫಸಲು ಕೊಡುವ ಮಾವಿನ ಮರವಾಗಿರಬಹುದು ಅಥವಾ ತಂಪು ಕೊಡುವ ಹೊಂಗೆ ಮರವಾಗಿರಬಹುದು. ಪ್ರತಿಯೊಂದು ಮರಕ್ಕೆ ವರ್ಷಕ್ಕೆ ಇಂತಿಷ್ಟು ಬಾಡಿಗೆಯೆಂದು ಸರ್ಕಾರ ಪಾವತಿಸಬೇಕು. ಯಾವುದೇ ಮರ ಕಡಿದರೂ ಜಾಮೀನು ನೀಡಲಾಗದ ಅರೆಸ್ಟ್ ವಾರೆಂಟ್ ಜಾರಿಗೊಳಿಸಬೇಕು. ಇಂದಿಗೂ ಶೇ.೯೦ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೀರು ಕಾಯಿಸಲು ಹಾಗು ಅಡಿಗೆ ಮಾಡಲು ಸೌದೆಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮರಗಳು ನಾಶವಾಗುವುದಲ್ಲದೆ ಹೊಗೆಯಿಂದ ಇಂಗಾಲವು ಹೊರಸೂಸುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ಒಲೆಗಳನ್ನು ಹಾಗೂ ಅಡಿಗೆಗೆ ಬಯೋಗ್ಯಾಸ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇಂಗಾಲವನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸಾಯ ಪದ್ಧತಿಗಳ ಬಗ್ಗೆ ರೈತರಿಗೆ ವಿವರಿಸಿ ಹೇಳಬೇಕು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೊರಕುವ ವಿಶ್ವಸಂಸ್ಥೆಯ ಸಬ್ಸಿಡಿಯನ್ನು ರೈತರಿಗೆ ತಲುಪಿಸಬೇಕು. ೪೦೦೦ ಕ್ಯೂಬಿಕ್ ಕಿ.ಮಿ.ಗಳಷ್ಟು ಮಳೆ ನೀರು ನಮ್ಮ ದೇಶದಲ್ಲಿ ಆಗುತ್ತಿದೆ. ಆದರೂ ನಾವು ವ್ಯವಸಾಯಕ್ಕೆ, ಕೈಗಾರಿಕೆಗೆ ಹಾಗೂ ಕುಡಿಯುವ ನೀರಿಗೆ ಇನ್ನೂ ಅಂರ್ತಜಲವನ್ನು ಅವಲಂಬಿಸಿದ್ದೇವೆ. ನಮ್ಮ ದೇಶದ ಮೇಲೆ ಬೀಳುವ ಸೌರ ಶಕ್ತಿಯಿಂದ ಇಡಿ ಏಶಿಯಾ ಖಂಡದ ಎಲ್ಲ ದೀಪಗಳನ್ನು ಉರಿಸಬಹುದಾದರೂ ನಮ್ಮ ದೇಶದಲ್ಲಿ ೨೪ ಗಂಟೆ ವಿದ್ಯುತ್ ಪೂರೈಕೆಯಿಲ್ಲ. ಪ್ರಪಂಚದ ಅರ್ಧ ಜನಸಂಖ್ಯೆಗೆ ಆಹಾರ ಬೆಳೆಯುವಷ್ಟು ಫಲವತ್ತಾದ ಭೂಮಿ, ಯಥೇಚ್ಚವಾದ ನೀರಿದ್ದರೂ ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇಡೀ ವಿಶ್ವಕ್ಕೆ ಸಾಕಾಗುವಷ್ಟು ನುರಿತ ರೈತರು, ಕಾರ್ಮಿಕರು, ಇಂಜಿನಿಯರುಗಳಿದ್ದರೂ ಇವರಿಗೆ ಉದ್ಯೋಗ ಕೊಡಲು ನಮಗಾಗುತ್ತಿಲ್ಲ. ೭೫ ಲಕ್ಷಕ್ಕೂ ಹೆಚ್ಚು ಕೋಟಿ ರೂಗಳು ದೇಶದ ಹೊರಗೆ ಸ್ವಿಸ್ ಬ್ಯಾಂಕುಗಳಲ್ಲಿ ಭೂಗತವಾಗಿದ್ದರೆ, ೯೦ ಲಕ್ಷ ಕೋಟಿ ರೂಗಳು ನಮ್ಮ ದೇಶದಲ್ಲಿ ಕಪ್ಪು ಹಣದ ರೂಪದಲ್ಲಿ ಭೂಗತವಾಗಿದೆ. ಇಷ್ಟು ಹಣವಿದ್ದರೂ ನಾವು ಬೇರೆ ದೇಶಗಳಿಂದ ಸಾಲ ತರುವುದು ತಪ್ಪಿಲ್ಲ. ನಮ್ಮಲ್ಲಿರುವ ಈ ಸಂಪತ್ತನ್ನೂ ಉಪಯೋಗಿಸಿಕೊಳ್ಳಲು ಯೋಜನೆಗಳನ್ನು ರೂಪಿಸಬೇಕು. ಈಗಿರುವ ನರೇಗಾ (NREGA), ಆಹಾರ ಸುರಕ್ಷತೆ ಕಾರ್ಯಕ್ರಮಗಳ ಜೊತೆ ಇಂಗಾಲ ತಗ್ಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಅಥವಾ ಫೀಡ್ (FEED) ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಮೂರು ಕಾರ್ಯಕ್ರಮಗಳನ್ನು ಜೋಡಿಸಿ ಆಹಾರ (ಫುಡ್), ಶಕ್ತಿ (ಎನರ್ಜಿ), ಉದ್ಯೋಗ (ಎಂಪ್ಲಾಯ್ಮೆಂಟ್) ಪರಿಸರ (ಎನವಿರಾನ್‌ಮೆಂಟ್) ಮತ್ತು ಅಭಿವೃದ್ಧಿ (ಡೆವೆಲಪಮೆಂಟ್) ಕಾಯಕ್ರಮವನ್ನು ರೂಪಿಸಬಹುದು. ನರೇಗಾ ಕಾರ್ಯಕ್ರಮಕ್ಕೆ ಪ್ರತಿವರ್ಷ ೪೦,೦೦೦ ಕೋಟಿಗೂ ಹೆಚ್ಚು ಹಣ ಕೇಂದ್ರ ಸರ್ಕಾರ ವೆಚ್ಚಮಾಡುತ್ತಿದೆ. ಇದರಲ್ಲಿ ಶೇ.೪೦%ರಷ್ಟು ಹಣ ದುರುಪಯೋಗವಾಗುತ್ತಿದ್ದರೂ ಈ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದುಬಹುತೇಕ ಇಂಗಾಲವು ನಗರಗಳಲ್ಲಿ ಹೊರಸೂಸಿದರೆ ಅದನ್ನು ನಿಯಂತ್ರಿಸುವ ಶಕ್ತಿ ಗ್ರಾಮೀಣ ಪ್ರದೇಶಗಳಲ್ಲಿದೆ. ಇನ್ನು ಮುಂದೆ ಇಂಗಾಲ ಮಿತಿ ಅಂತರಾಷ್ಟ್ರೀಯ ಕಾನೂನು ಜಾರಿಗೆ ಬರುವುದರಿಂದ ನಾವು ಇಂಗಾಲ ಮಿತಿಯ ಬಗ್ಗೆ ಹೆಚ್ಚು ಗಮನಹರಿಸಬೇಕು.

ಇಂಗಾಲ ಮಿತಿಗೊಳಸದಿದ್ದರೆ ನಮ್ಮ ದೇಶದ ಕೈಗಾರಿಕೋತ್ಪಾದನೆ ಮತ್ತು ಆರ್ಥಿಕತೆಯ ಮೇಲೆ ಬಾರಿ ಪೆಟ್ಟಾಗುತ್ತದೆ. ನಮ್ಮ ದೇಶವನ್ನು ಇಂಗಾಲ ಹಾಗೂ ಪರಿಸರ ಸ್ನೇಹಿಯನ್ನಾಗಿ ಮಾಡಲು ಹೆಚ್ಚು ಬಂಡವಾಳ ಹೂಡಬೇಕಾಗುತ್ತದೆ. ನಮ್ಮಲ್ಲಿರುವ ಸೌರ, ವಾಯು, ಜಲ ಶಕ್ತಿಗಳನ್ನೂ, ಅರಣ್ಯ, ಮಳೆನೀರು, ನುರಿತ ಕಾರ್ಮಿಕ ವರ್ಗವನ್ನೂ, ಫಲವತ್ತಾದ ಭೂಮಿ, ಕಪ್ಪು ಹಣವನ್ನೊಳಗೊಂಡ `ಫೀಡ್' ಎಂಬ ಕಾರ್ಯಕ್ರಮ ರಚನೆಮಾಡಲು ಕೇಂದ್ರ ಸರ್ಕಾರ ಚಿಂತಿಸಬೇಕು. ಸ್ವಿಸ್‌ಬ್ಯಾಂಕ್‌ನಲ್ಲಿರುವ ಹಣ ತರಲಾಗದಿದ್ದರೂ, ನಮ್ಮ ದೇಶದಲ್ಲಿ ಭೂಗತವಾಗಿರುವ ೯೦ ಲಕ್ಷ ಕೋಟಿಗೂ ಹೆಚ್ಚು ಕಪ್ಪು ಹಣವನ್ನು ಫೀಡ್ ಕಾರ್ಯಕ್ರಮದ ಹೆಸರಲ್ಲಿ ತೆರಿಗೆ ವಿನಾಯಿತಿ ಬಾಂಡ್ಸ್ ಮಾಡಿ ಹೊರತಂದರೆ ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣ ದೊರೆಯುವುದಲ್ಲದೆ, ರಾಷ್ಟ್ರೀಯ ನದಿ ಜೋಡಣೆಯಂತಹ ಯೋಜನೆಗಳಿಗೂ ಹಣ ದೊರೆಯುವುದು. ನರೇಗಾ ಕಾರ್ಯಕ್ರಮದಲ್ಲಿ ದುರುಪಯೋಗವಾಗಿರುವ ಅನುಭವದಿಂದ ಪಾಠ ಕಲಿತು ಹಣ ಸೋರುವಿಕೆಯನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಫೀಡ್ ಕಾರ್ಯಕ್ರಮ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಫೀಡ್ ಮಾಡದೆ ದೇಶದ ಅಭಿವೃದ್ಧಿಗೆ ಫೀಡ್ ಮಾಡುವಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಬೇಕು.

Thursday, August 12, 2010

ಬರಪೀಡಿತ ಜಿಲ್ಲೆಗಳಿಗೆ ಬೇಕು ನೇತ್ರಾವತಿಯ ಬೈಪಾಸ್ ಸರ್ಜರಿ

ನನ್ನ ಈ ಲೇಖನ ಇಂದಿನ (12/08/2010) `ಸಂಯುಕ್ತ ಕರ್ನಾಟಕ'ದಲ್ಲಿ ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ:

೧೮೯೫ರಲ್ಲಿ ಬ್ರಿಟಿಷರು ಇಂದಿನ ಕೇರಳದಲ್ಲಿರುವ ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ಪೆರಿಯಾರ್ ನದಿಗೆ ಪಶ್ಚಿಮಘಟ್ಟಗಳಲ್ಲಿ ಅಣೆಕಟ್ಟು ಕಟ್ಟಿ ಕಾಲುವೆ ಮಾಡಿ ಪೂರ್ವಭಿಮುಖವಾಗಿ ಹರಿಸಿ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಿಗೆ ಹರಿಸುವುದಲ್ಲದೆ ವೇಗೈ ನದಿಗೆ ಜೋಡಣೆ ಮಾಡಿದರು, ಈ ಯೋಜನೆ ಇಂದಿಗೂ ಯಶಸ್ವಿಯಾಗಿ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಿಗೆ ನೀರುಣಿಸುತ್ತಿದೆ. ಅದೆ ರೀತಿ ಸ್ವಾತಂತ್ರ ಬಂದ ನಂತರ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುವ ಇಂಡಸ್ ನದಿಯ ಹಂಚಿಕೆ ವಿಚಾರದಲ್ಲಿ ವಿವಾದವಾದಾಗ ಪೂರ್ವದ ಉಪನದಿಗಳನ್ನು ಭಾರತಕ್ಕೆ ಕೊಟ್ಟು ಪಶ್ಚಿಮದ ಉಪನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು, ಹಾಗೂ ಪೂರ್ವ ಉಪನದಿಗಳಿಂದ ನೀರು ಪಡೆಯುತ್ತಿದ್ದ ಪಾಕಿಸ್ತಾನದ ಪ್ರದೇಶಕ್ಕೆ ಅಮೇರಿಕಾ, ಇಂಗ್ಲೆಂಡ್ ಹಾಗು ವಿಶ್ವ ಬ್ಯಾಂಕಿನ ನೆರವನ್ನು ಕೊಟ್ಟು ಪಶ್ಚಿಮದ ಉಪನದಿಗಳ ಹೆಚ್ಚುವರಿ ನೀರನ್ನು ಪೂರ್ವಕ್ಕೆ ತಿರುಗಿಸಲಾಯಿತು. ಚೀನಾ ದೇಶದಲ್ಲಿ ದಕ್ಷಿಣದ ಯಾಂಗ್ಸೆ ನದಿಯನ್ನು ಉತ್ತರದ ಹಳದಿ ನದಿಗೆ ಜೋಡಿಸಲಾಗಿದೆ. ಇದಲ್ಲದೆ ಹಿಮಾಲಯದ ಬಯಾಂಕ ಪರ್ವತಗಳಲ್ಲಿ ಅಣ್ವಸ್ತ್ರಗಳಿಂದ ಕಾಲುವೆ ಕೊರೆದು ಚೈನಾದ ಮರಳುಗಾಡಿಗೆ ಬ್ರಹ್ಮಪುತ್ರ ನದಿಯನ್ನು ಹರಿಸುವ ಯೋಜನೆ ಸಿದ್ಧಗೊಂಡಿದೆ. ಇದಲ್ಲದೆ ವಿಶ್ವದಲ್ಲಿ ಅನೇಕ ನದಿ ತಿರುವು ಯೋಜನೆಗಳು ಅನುಷ್ಠಾನವಾಗಿವೆ. ಆಗಿನ ಎನ್.ಡಿ.ಎ. ಸರ್ಕಾರ ಮಹತ್ತರ ರಾಷ್ಟ್ರೀಯ ನದಿ ಜೋಡಣೆಯ ಕನಸನ್ನು ಕಂಡಿತ್ತು. ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳು ಅಂತರರಾಷ್ಟ್ರೀಯ ನದಿಗಳಾಗಿರುವುದರಿಂದ ಬೇರೆ ದೇಶಗಳ ಅಕ್ಷೇಪಣೆ ಬರಬಹುದು. ಆದರೆ ಮಹಾನದಿ-ಗೋದಾವರಿಯಿಂದ ಪ್ರತಿವರ್ಷ ಸಮುದ್ರಕ್ಕೆ ಹರಿಯುವ ೯೩೦ ಟಿ.ಎಂ.ಸಿ.ಗೂ ಹೆಚ್ಚು ನೀರನ್ನು ಕೃಷ್ಣಾ -ಪೆನ್ನಾರ್-ಪಾಲಾರ್-ಕಾವೇರಿ-ಗುಂಡಾರ್-ವೇಗೈ ನದಿಗಳಿಗೆ ಜೋಡಿಸಿದರೆ ಆಂಧ್ರ-ಕರ್ನಾಟಕ-ತಮಿಳುನಾಡಿಗೆ ಉಪಯೋಗವಾಗಲಿದೆ. ಇದರಿಂದ ಕಾವೇರಿ ಡೆಲ್ಟಾ ಪ್ರದೇಶಕ್ಕೆ ಹೆಚ್ಚು ನೀರು ದೊರೆತರೆ, ಕಾವೇರಿಯ ಮೇಲ್‌ಹರಿವಿನಲ್ಲಿರುವ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸಿ, ಕಾವೇರಿ ವಿವಾದಕ್ಕೂ ತೆರೆಯೆಳೆಯಬಹುದು. ಪೆನಿನ್ಸೂಲಾರ್ ರಿವರ್ ಗ್ರಿಡ್ ಯೋಜನೆಯಲ್ಲಿ ಈ ನದಿಗಳಲ್ಲದೆ ನೇತ್ರಾವತಿ-ಹೇಮಾವತಿ ಜೋಡಣೆಯು ಒಂದು ಭಾಗವಾಗಿದೆ. ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ. ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ ಹಾಗೂ ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ. ಮೋಹನ್ ಹೆಗಡೆಯವರು ಯೋಜನೆಯ ಬಗ್ಗೆ ಸರಿಯಾಗಿ ಅರಿತು, ಅವಶ್ಯಕತೆಯಿದ್ದರೆ ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಿತಿಯಾದ ರೀತಿಯಲ್ಲಿ ನದಿ ಜೋಡಣೆಗಳು ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿದ್ದರೆ, ದುರಾಸೆಯಿಂದ ಮಾಡಿರುವ ಅನೇಕ ನದಿ ಜೋಡಣೆಗಳು ವಿಫಲವಾಗಿರುವ ಅನೇಕ ಉದಾಹರಣೆಗಳಿವೆ. ಸಾವಿರಾರು ಚದರ ಕಿ.ಮೀ.ಗಳಷ್ಟು ನೀರು ನಮ್ಮ ದೇಶದಲ್ಲಿ ಸಮುದ್ರದ ಪಾಲಾಗುತ್ತಿದ್ದರೆ, ಆಫ್ರಿಕಾ ಖಂಡದ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಭಾರತದ ಕಂಪೆನಿಗಳು ಕಡಿಮೆ ದರದಲ್ಲಿ ಆಹಾರ ಉತ್ಪಾದನೆಗಾಗಿ ಲಕ್ಷಾಂತರ ಹೆಕ್ಟೇರುಗಳಷ್ಟು ಜಮೀನನ್ನು ಖರೀದಿಸಿವೆ. ಶೇ.೯೦ರಷ್ಟು ಮಂದಿ ನಮ್ಮ ರಾಷ್ಟ್ರದಲ್ಲಿ ವ್ಯವಸಾಯ ಅವಲಂಬಿತರಾಗಿದ್ದರೂ ವ್ಯವಸಾಯಕ್ಕೆ ಬೇಕಿರುವ ನೀರೊನ್ನೊದಗಿಸದೆ ರಾಷ್ಟ್ರಕ್ಕೆ ಅಗತ್ಯವಿರುವ ಧವಸದಾನ್ಯಗಳನ್ನು ಬೆಳೆಯಲಿಕ್ಕಾಗದೆ, ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಭಾರತ ಎದುರಿಸುತ್ತಿದೆ. ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಕ್ರೆಡಿಟ್ ಸಹ ಜಾರಿಗೆ ಬರಲಿದೆ. ಅಂದರೆ ಪ್ರತಿ ದೇಶದಲ್ಲಿ ವಾಹನ ಹಾಗೂ ಕೈಗಾರಿಕೆಗಳಿಂದ ಭೂಮಿಗೆ ಉಗುಳುವ ಇಂಗಾಲವನ್ನು ಹೀರಲು ಮರಗಳನ್ನು ಬೆಳೆಸಬೇಕಾಗುತ್ತದೆ. ಆರ್ಥಿಕತೆಗೆ, ಆಹಾರ, ಕಾರ್ಬನ್ ಕ್ರೆಡಿಟ್, ಕೈಗಾರಿಕೆ, ವ್ಯವಸಾಯ ಹಾಗೂ ಮುಖ್ಯವಾಗಿ ಕುಡಿಯುವುದಕ್ಕೆ ನೀರು ಅತ್ಯವಶ್ಯಕ. ಆದುದರಿಂದ ನಾವು ನದಿಜೋಡಣೆ ಒಂದೇ ಅಲ್ಲದೆ, ನೀರನ್ನು ಸಂಗ್ರಹಿಸುವ ಹಾಗೂ ಉಪಯೋಗಿಸುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನದಿಜೋಡಣೆಯ ಬಗ್ಗೆ ಮಾತನಾಡುವವರನ್ನು ಪರಿಸರವಾದಿಗಳು ಅಸ್ಪೃಶ್ಯರಂತೆ ನೋಡುವುದನ್ನು ಬಿಟ್ಟು ಪರಿಸರಕ್ಕೆ ಧಕ್ಕೆಯಾಗದಂತೆ ಈ ರೀತಿಯ ಯೋಜನೆಗಳನ್ನು ಅಳವಡಿಸಲು ಸಹಕರಿಸಬೇಕು. ಮೋಹನ್ ಹೆಗ್ಡೆಯವರು ಈ ಯೋಜನೆಗೆ ರಾಜಕೀಯ ಬಣ್ಣವನ್ನು ಬಳೆದು ಬರ ಪೀಡಿತ ಜಿಲ್ಲೆಗಳ ಜನರ ಬರೆಗಳಿಗೆ ಉಪ್ಪು ಸವರಿದ್ದಾರೆ. ಪರಮಶಿವಯ್ಯನವರ ನೇತ್ರಾವತಿ ಮಳೆ ಕೊಯ್ಲು ಬರಪೀಡಿತ ಜಿಲ್ಲೆಗಳಿಗೆ ಈ ಮುಂದಿನ ಕಾರಣಗಳಿಗಾಗಿ ಅವಶ್ಯಕವಿದೆ.
೪೪೦೦ ಮಿ.ಮೀ. ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿರುವಾಗ ಸರಾಸರಿ ೬೭೪ ಮಿ.ಮೀ. ಮಳೆಯಾಗುವ ಬರಡು ಭೂಮಿಯಲ್ಲಿ ಮಳೆಗಾಲದಲ್ಲೂ ನೀರಿಗೆ ಪರದಾಡುವ ಪರಿಸ್ಥಿತಿ ಇದೆಯೆಂದರೆ ಆಶ್ಚರ್ಯವಿಲ್ಲ. ಸರ್ಕಾರದ ಅಂಕಿ ಅಂಶಗಳ ಅನ್ವಯ ಬರಪೀಡಿತ ಜಿಲ್ಲೆಗಳಲ್ಲಿ ೪೮೬ರಿಂದ ೭೦೦ ಮಿ.ಮೀ. ಮಳೆಯಾಗುತ್ತದೆ. ಕನಿಷ್ಠ ೫೦ ಮಿ.ಮೀ. ಮಳೆ ರಭಸವಾಗಿ ಮೂರು ಗಂಟೆ ಕಾಲ ಸುರಿದರೆ ಕೆರೆಗಳಿಗೆ ನೀರು ಬರುತ್ತದೆ. ಈ ಜಿಲ್ಲೆಗಳಲ್ಲಿ ವಾರ್ಷಿಕ ೧೭ರಿಂದ ೪೫ ದಿನಗಳು ಮಳೆಯಾಗುತ್ತದೆ. ಎರಡು ಗಂಟೆಗೂ ಹೆಚ್ಚು ಮಳೆಯಾಗುವ ದಿನಗಳು ತೀರ ವಿರಳ. ಮಳೆಯಾದರೂ ಈ ಬಿಸಿಲುನಾಡಿನಲ್ಲಿ ನೀರು ಆವಿಯಾಗುವುದರಿಂದ, ಭೂಮಿಗೆ ಜಿನುಗುವುದರಿಂದ ಹಾಗೂ ಅಂತರ್ಜಲಕ್ಕೆ ಹಿಂಗುವುದರಿಂದ ಕೆರೆಗಳಲ್ಲಿ ನೀರು ಕೆಲವು ತಿಂಗಳುಗಳಿಗಿಂತ ಹೆಚ್ಚು ನಿಲ್ಲಲಾರದು. ಸತತವಾಗಿ ಹಾಗು ನಿರ್ದಿಷ್ಟ ಕಾಲದಲ್ಲಿ ಮಳೆಯಾಗದ ಕಾರಣ ಹಾಗೂ ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಈ ಜಿಲ್ಲೆಗಳಲ್ಲಿ ಒಟ್ಟು ೧೫,೪೪೨ ಕೆರೆಗಳಿವೆ. ೨೦೦೬ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ, ೨೦೦೭ರಲ್ಲಿ ಶೇ.೪೫ ಹಾಗೂ ೨೦೦೮ರಲ್ಲಿ ಶೇ.೭೦ರಷ್ಟು ಕೆರೆಗಳಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ತೊಟ್ಟು ಸಹ ನೀರು ಬಂದಿಲ್ಲ. ೩ ಕೋಟಿ ಜನಸಂಖ್ಯೆಯ ಹಳೆ ಮೈಸೂರಿನ ೧೪ ಬರಪೀಡಿತ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗು ೩,೨೫೦೦೦ ಕೋಟಿ ಗೃಹ ಉತ್ಪನ್ನ ನೀಡುವ ಬೆಂಗಳೂರು ನಗರ ನೀರಿನ ಬವಣೆಯಿಂದ ನರಳುತ್ತಿದೆ. ನಮ್ಮ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಅಸಮತೋಲನ ಆಗಿದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದುದರಿಂದಲೆ ೧೪ ಜಿಲ್ಲೆಗಳ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪರಮಶಿವಯ್ಯನವರ ಯೋಜನೆ ಈ ಅಸಮತೋಲನವನ್ನು ನಿವಾರಿಸುವಲ್ಲಿ ಉಪಯೋಗವಾಗಬಹುದು. ಈ ಯೋಜನೆ ೮೬ ತಾಲ್ಲೂಕುಗಳಲ್ಲದೆ ಬೆಂಗಳೂರು ನಗರಕ್ಕೂ ನೀರನ್ನು ತರಲಿದೆ.

ಹಳೆ ಮೈಸೂರಿನ ೧೪ ಜಿಲ್ಲೆಗಳ ಪೈಕಿ (ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡು) ೩೭.೧೪ ಲಕ್ಷ ಹೆಕ್ಟೇರುಗಳಷ್ಟು ಭೂಮಿ ಬಿತ್ತನೆಯಾಗುವ ಪ್ರದೇಶ, ಅದರಲ್ಲಿ ೭.೬೯ ಲಕ್ಷ ಹೆಕ್ಟೇರುಗಳಷ್ಟು ಅಂದರೆ ಶೇ.೧೯%ರಷ್ಟು ಭೂಮಿಗೆ ನೀರಾವರಿ ದೊರತಿದೆ. ಕಾವೇರಿಯಲ್ಲಿರುವ ಒಟ್ಟು ನೀರು ೭೨೭ ಟಿ.ಎಂ.ಸಿ.ಯಷ್ಟು. ಅದರಲ್ಲಿ ಹಳೆ ಮೈಸೂರಿನ ಜಲಾಯನ ಪ್ರದೇಶದಲ್ಲಿ ಉತ್ಪತ್ತಿಯಾಗುವ ನೀರು ೪೨೫ ಟಿ.ಎಂ.ಸಿ. ಅದರಲ್ಲಿ ಕೇವಲ ೨೭೦ ಟಿ.ಎಂ.ಸಿ.ಯಷ್ಟು ನೀರನ್ನು ಉಪಯೋಗಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಆದುದರಿಂದ ಕೇವಲ ೭,೬೯,೯೮೮ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿಯಾಗುತ್ತಿದೆ. ಕೆ.ಆರ್.ಎಸ್. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದ ವಿವಿಧ ಬೆಳೆಗಳಿಗೆ ೬೧.೨೦ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಈಗಾಗಲೆ ಉಪಯೋಗಿಸುತ್ತಿದ್ದರೆ ಅದನ್ನು ೩೮.೯೮ ಟಿ.ಎಂ.ಸಿ.ಗೆ ಇಳಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೨೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿಯಿಂದ ದೊರೆತಿದ್ದರೂ ಅದರಲ್ಲಿ ೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿ ಜಲಾಯನ ಪ್ರದೇಶದಲ್ಲಿ ಬರುವ ಕೆರೆಗಳ ಲೆಕ್ಕದಲ್ಲಿದೆ. ನೀರಾವರಿ ಇಲಾಖೆಯ ಅನ್ವಯ ಕೆರೆಗಳಿಂದ ಕೇವಲ ೧೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ನಮಗೆ ದೊರಕುತ್ತಿದೆ. ಕೇಂದ್ರ ಸರ್ಕಾರ ಬಿಳೆಗೊಂಡ್ಲುವಿನಲ್ಲಿ ಅಳವಡಿಸಿರುವ ಮಾಪನದ ಅನ್ವಯ ಅಧಿಕ ವರ್ಷಗಳಲ್ಲಿ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ಪ್ರತಿ ಸಾಲು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ (೧೯೨+೧೪೮). ಅಂದರೆ ತಮಿಳುನಾಡಿಗೆ ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೧೯೨ ಟಿ.ಎಂ.ಸಿ. ನೀರಲ್ಲದೆ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಈ ಹೆಚ್ಚುವರಿ ನೀರು ನ್ಯಾಯಯುತವಾಗಿ ಉತ್ಪತ್ತಿಯಾಗುವ ರಾಜ್ಯಕ್ಕೆ ಸೇರಬೇಕಾದದ್ದು. ಟ್ರಿಬ್ಯೂನಲ್ ವರದಿಯು ಸಹ ಹೆಚ್ಚುವರಿ ನೀರು ಯಾರಿಗೆ ಸೇರಬೇಕೆಂದು ಎಲ್ಲೂ ಹೇಳಿಲ್ಲ. ಆದರೆ ೨೦೦೭ರಲ್ಲಿ ಡಿ.ಎಂ.ಕೆ.ಯನ್ನು ಮೆಚ್ಚಿಸಲು ಯು.ಪಿ.ಎ. ಸರ್ಕಾರ ಹೆಚ್ಚುವರಿ ನೀರನ್ನು ಹೇಗೆ ಹಂಚಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಿದೆ. ಈ ವಿಚಾರವನ್ನು ಸರ್ವೋಚ್ಛ ನ್ಯಾಯಾಲಯ ಇನ್ನು ಕೈಗೆತ್ತಿಕೊಂಡಿಲ್ಲ. ತಮಿಳುನಾಡಿಗೆ ಈ ವಿವಾದ ನ್ಯಾಯಾಲಯದಲ್ಲಿ ಹೆಚ್ಚು ದಶಕಗಳು ಉಳಿದಷ್ಟು, ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಪ್ರತಿವರ್ಷ ಹರಿದು ಹೋಗುತ್ತಿರುತ್ತದೆ. ಕಳೆದ ಮೂರು ದಶಕಗಳ ನಮ್ಮ ರಾಷ್ಟ್ರದ ರಾಜಕಾರಣ ಗಮನಿಸಿದರೆ ಯಾವುದೇ ಪಕ್ಷ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಬೇಕಾದರೆ ತಮಿಳುನಾಡಿನ ಪಕ್ಷಗಳ ಬೆಂಬಲ ಅತ್ಯಗತ್ಯ. ಅಂದರೆ ಕಾವೇರಿಯಿಂದ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳು ನೀರು ಪಡೆಯುವುದು ನನಸಾಗದ ಕನಸು.
ಕೃಷ್ಣಾ ನದಿಯಿಂದ ನಮ್ಮ ರಾಜ್ಯಕ್ಕೆ ೭೩೪ ಟಿ.ಎಂ.ಸಿ. ಸ್ಕೀಮ್ `ಎ'ನಿಂದ ಹಾಗೂ ೧೮೩ ಟಿ.ಎಂ.ಸಿ. ಸ್ಕೀಮ್ `ಬಿ'ನಿಂದ ಮಂಜೂರಾಗಿದೆ (ಮಂಜೂರಾಗಲಿದೆ). ಅಂದರೆ ಒಟ್ಟು ೯೧೭ ಟಿ.ಎಂ.ಸಿ.ಯಷ್ಟು ನೀರು. ಇದರಲ್ಲಿ ತುಂಗಾಭದ್ರಾ ನದಿಯ ೪೫೦ ಟಿ.ಎಂ.ಸಿ.ಯಷ್ಟು ನೀರು ಸೇರಿದೆ. ಹಳೆ ಮೈಸೂರಿಗೆ ಸ್ಕೀಮ್ `ಎ'ನಿಂದ ೯೬ ಹಾಗೂ ಸ್ಕೀಮ್ `ಬಿ'ನಿಂದ ೨೨ ಟಿ.ಎಂ.ಸಿ.ಯಷ್ಟು ದೊರೆತಿದೆ. ನ್ಯಾಯಯುತವಾಗಿ ಹಳೆ ಮೈಸೂರಿನ ಪಾಲಿನ ತುಂಗಭದ್ರಾ ನದಿಯ ೪೫೦ರಲ್ಲಿ ಕನಿಷ್ಠ ೨೫೦ ಟಿ.ಎಂ.ಸಿ.ಯಷ್ಟಾದರೂ ನೀರು ಕೊಡಬೇಕಾಗಿತ್ತು. ೯೧೭ ಟಿ.ಎಂ.ಸಿ.ಯಲ್ಲಿ ಶೇ.೭೭%ರಷ್ಟು ಹೈದರಾಬಾದ್ ಕರ್ನಾಟಕಕ್ಕೆ ನಮ್ಮ ಸರ್ಕಾರ ಕೊಟ್ಟರೆ, ಉಳಿದ ಶೇ.೧೧% (೧೦೦ ಟಿ.ಎಂ.ಸಿ) ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಇದಲ್ಲದೆ ತೆಲುಗು ಗಂಗಾ ಅಡಿಯಲ್ಲಿ ತಮಿಳುನಾಡಿನ ಚೆನ್ನೈಗೆ ಕೃಷ್ಣಾ ನದಿಯ ಕರ್ನಾಟಕದ ಪಾಲಿನಲ್ಲಿ ೫ ಟಿ.ಎಂ.ಸಿ. ನೀರು ಹೋಗುತ್ತಿದೆ. ಈಗಾಗಲೆ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶವು ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನಷ್ಟೇ ಬಲಿಷ್ಠವಾದದ್ದು ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಮ್ಮ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿದೆ. ೧೯೫೬ರ ಕರ್ನಾಟಕ ಏಕೀಕರಣದ ನಂತರ ಸರ್ಕಾರ ೧೨,೦೦೦ ಕೋಟಿಗೂ ಹೆಚ್ಚು ಹಣವನ್ನು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡಿದೆ. ಏಕೀಕರಣದ ನಂತರ ಬಹುತೇಕ ನೀರಾವರಿಯ ಮುಖ್ಯ ಅಭಿಯಂತರರು ಹಾಗೂ ನೀರಾವರಿ ಸಚಿವರು ಉತ್ತರ ಕರ್ನಾಟಕಕ್ಕೆ ಸೇರಿದವರು. ಮಗದಮ್, ಬಾಳೆಕುಂದ್ರೆ ಹಾಗು ಅಂಗಡಿಯವರು ಮುಖ್ಯ ಅಭಿಯಂತರರಾದರೆ, ಇವರಿಗೆ ಬೆಂಬಲವಾಗಿ ವಿರೇಂದ್ರ ಪಾಟೀಲ್, ಖರ್ಗೆ, ಅಲ್ಲಂ ವೀರಭದ್ರಪ್ಪ, ಹೆಚ್.ಕೆ ಪಾಟೀಲರು ನೀರಾವರಿ ಸಚಿವರಾದರು. ಈಗ ಬೊಮ್ಮಾಯಿ ನೀರಾವರಿ ಸಚಿವರಾದರೆ ದೇಸಾಯಿ ನೀರಾವರಿ ಸಲಹೆಗಾರರಾಗಿದ್ದಾರೆ. ಇದರ ಫಲವಾಗಿ ೧೯೫೬ರಿಂದ ಇದುವರೆಗೆ ೨೦ ಲಕ್ಷ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ. ಕಾಂಗ್ರೆಸ್, ಜೆ.ಡಿ.ಎಸ್ ಹಾಗು ಬಿ.ಜೆ.ಪಿ. ಪಕ್ಷಗಳು ಈ ಪ್ರಾಂತ್ಯದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅಂದರೆ ಬರಪೀಡಿತ ಹಳೆ ಮೈಸೂರು ಪ್ರಾಂತ್ಯದ ಎರಡನೆಯ ಕನಸು ಸಹ ಭಗ್ನವಾದಂತೆ.
ಹೇಮಾವತಿ ನದಿಯಿಂದ ಈಗಾಗಲೆ ೫೫ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಬಳಸುತ್ತಿದ್ದೇವೆ. ಇದು ಕಾವೇರಿಯ ಉಪನದಿಯಾಗಿರುವುದರಿಂದ ಕಾವೇರಿ ಟ್ರಿಬ್ಯೂನಲ್‌ನ ಭೂತಗನ್ನಡಿಯಡಿಯಲ್ಲಿ ಬರುತ್ತದೆ. ಟ್ರಿಬ್ಯೂನಲ್ ಕೇವಲ ೪೫ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಬಳಸಿ ಎಂದು ಆದೇಶಿಸಿದೆ. ಈಗಾಗಲೆ ಹೇಮಾವತಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಿಗೆ ನೀರುಣಿಸಲು ಸಾದ್ಯವಾಗುತ್ತಿಲ್ಲ. ಇರುವ ಒಂದೇ ಮಾರ್ಗವೆಂದರೆ ನೇತ್ರಾವತಿಯ ಬೃಹತ್ ಮಳೆ ಕೊಯ್ಲು ಯೋಜನೆ. ಆದುದರಿಂದಲೆ ನಾವು ಈ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮನ್ನು ನೀತಿಗೆಟ್ಟವರು ಎಂದು ಕೆಲವರು ಬಣ್ಣಿಸಿದರೆ, ಇನ್ನು ಕೆಲವರು ಪರಿಸರ ವಿರೋಧಿಗಳೆಂಬ ಪಟ್ಟ ಕಟ್ಟಿದ್ದಾರೆ. ಪರಮಶಿವಯ್ಯನವರ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಲ್ಲದೆ, ಬೆಂಗಳೂರು ನಗರಕ್ಕೂ ನೀರು ದೊರೆಯಲಿದೆ. ಶೇ.೯೦ರಷ್ಟು ಹೋಟೆಲ್ ಉದ್ಯಮದವರಲ್ಲದೆ ಸುಮಾರು ೫ ಲಕ್ಷ ಕರಾವಳಿಯ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದನ್ನು ಅನಗತ್ಯ ಹೇಳಿಕೆಗಳು ಕೊಡುವ ಮುಂಚೆ ಈ ನಾಯಕರು ಯೋಚನೆ ಮಾಡಬೇಕು. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕರ್ನಾಟಕಕ್ಕೆ ಕರಾವಳಿಯಲ್ಲಿರುವ ನೇತ್ರಾವತಿ ನೀರನ್ನು ಕೊಟ್ಟು, ಕಾವೇರಿಯಲ್ಲಿರುವ ೧೪೮ ಟಿ.ಎಂ.ಸಿ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಕೊಡಲು ಆಗ್ರಹಿಸಿದ್ದಾರೆ ಹಾಗೂ ಕೃಷ್ಣಾ ನದಿಯ ಟ್ರಿಬ್ಯೂನಲ್ ಸ್ಕೀಮ್ ಬಿ ಯಲ್ಲಿ ೨೭೮ ಟಿ.ಎಂ.ಸಿ.ಗೆ ಬದಲು ಕೇವಲ ೧೮೩ ಟಿ.ಎಂ.ಸಿ.ಯಷ್ಟು ಮಾತ್ರ ಕರ್ನಾಟಕಕ್ಕೆ ಕೊಡಲು ಆದೇಶ ಮಾಡಲು ಹೊರಟಿದೆ. ನಾನು ಈ ಲೇಖನದಲ್ಲಿ ವಿವರಿಸಿರುವಂತೆ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯ ನಿವಾರಣೆಗೆ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಆಂಧ್ರ ಪ್ರದೇಶ (ಹಾಗು ಹೈದರಾಬಾದ್ ಕರ್ನಾಟಕ) ಹಾಗೂ ಕರಾವಳಿಯ ಪರಿಸರವಾದಿಗಳ ವಿರೋಧವಿದೆ. ಇದು ಹೇಗಿದೆಯೆಂದರೆ ಇತ್ತ ದರಿ, ಅತ್ತ ಪುಲಿ, ಹಿತ್ತಲಲ್ಲಿ ಮತ್ತೊಂದು ಪುಲಿಯೆಂಬಂತೆ.
ಅಂಕಿ ಅಂಶಗಳ ಪ್ರಕಾರ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ೧೯೯೭ರಲ್ಲಿ ೫೦೦ ಅಡಿಗಳು ಇದ್ದದ್ದು ೨೦೦೪ರಲ್ಲಿ ೧೨೦೦ ಅಡಿಗಳಿಗೆ ಕುಸಿದಿದೆ. ೫೭ ತಾಲ್ಲೂಕುಗಳಲ್ಲಿ ಅಂರ್ತಜಲ ಸಂದಿಗ್ಧ ಮಟ್ಟಕ್ಕೆ ತಲುಪಿದೆ. ೧೪,೨೫೭ ವಸತಿ ಪ್ರದೇಶದಲ್ಲಿ ಫ್ಲೋರೈಡ್ ಹಾಗು ನೈಟ್ರೇಟ್ ಲವಣಗಳು ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ. ೩೧.೨೦ ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳು ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿವೆ. ವ್ಯವಸಾಯವಿರಲಿ ಕುಡಿಯಲು ಶುದ್ಧ ನೀರಿಲ್ಲದೆ ತವಕಿಸುತ್ತಿವೆ. ಈ ಬರಪೀಡಿತ ಜಿಲ್ಲೆಗಳಿಗೆ ನೀರು ಬರುವ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಹಳೆ ಮೈಸೂರಿನಲ್ಲಿ ಕಾವೇರಿಯಿಂದ ೪೨೫ ಟಿ.ಎಂ.ಸಿ ಹಾಗು ತುಂಗಾಭದ್ರಾದಿಂದ ೪೫೦ ಟಿ.ಎಂ.ಸಿ.ಯಷ್ಟು ನೀರು ಉತ್ಪತ್ತಿಯಾದರೂ (ಒಟ್ಟು ೮೭೫ ಟಿ.ಎಂ.ಸಿ) ಕೇವಲ ೩೮೮ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಹಳೆ ಮೈಸೂರಿಗೆ ಲಭಿಸಿದೆ. ಆದುದರಿಂದ ಹಳೆ ಮೈಸೂರಿನ ಶೇ.೬೭% ಬರಪೀಡಿತ ಪ್ರದೇಶವಾಗಿದೆ. ಈ ಪ್ರದೇಶಕ್ಕೆ ನೀರಿನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಭಾರಿ ಅನ್ಯಾಯವಾಗಿದೆ. ಹೃದಯದಲ್ಲಿ ಹೇಗೆ ಟ್ರಿಪಲ್ ವೆಸೆಲ್ ಬ್ಲಾಕ್ ಆದಾಗ ಬೈಪಾಸ್ ಸರ್ಜರಿ ಅಗತ್ಯವೊ ಹಾಗೆ ಬರಪೀಡಿತ ಜಿಲ್ಲೆಗಳು ಸಾಯದೆ ಉಳಿಯ ಬೇಕಾದರೆ ಇರುವ ಒಂದೆ ಮಾರ್ಗ ಯಾವುದಾದರು ನದಿಯ ಬೈಪಾಸ್ ಸರ್ಜರಿ. ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಯಾಗಬೇಕಾದರೆ, ಕೆರೆಗಳಲ್ಲಿ ೩೬೫ ದಿನ ಕನಿಷ್ಠ ೩ ಮೀಟರುಗಳಷ್ಟು ನೀರು ಸತತವಾಗಿ ೧೫ಕ್ಕೂ ಹೆಚ್ಚು ವರ್ಷಗಳು ನಿಲ್ಲಬೇಕು. ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರುವು ಮಾಡಿ ಶೇ.೮%ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.೩೦ಕ್ಕೆ ಏರಿಸಬೇಕು. ಇದನ್ನು ಕೇವಲ ನೀರಿನ ಶೇಖರಣೆ, ಮಳೆ ಕೊಯ್ಲು, ಮಿತವಾದ ನೀರಿನ ಬಳಕೆ ಅಥವಾ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಮಾಡಲು ಸಾದ್ಯವಿಲ್ಲ. ಇವೆಲ್ಲವೂ ಹೃದ್ರೋಗಿ ಕೊಲೆಸ್ಟ್ರಾಲ್ ತಗ್ಗಿಸುವುದು, ಧೂಮಪಾನ ಬಿಡುವುದು ಹಾಗೂ ದೇಹದ ತೂಕವನ್ನು ಕರಗಿಸುವ ವಿಧಾನಗಳಂತೆ. ಯಾವುದಾದರೂ ನದಿಯಿಂದ ಬೈಪಾಸ್ ಸರ್ಜರಿ ಅತ್ಯಗತ್ಯ ಇರುವಂತೆ, ೧೫,೪೪೨ ಕೆರೆಗಳಿಗೆ ಆಂಜಿಯೊ ಪ್ಲಾಸ್ಟಿಯೂ ಅಗತ್ಯವಿದೆ. ಕೆರೆಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕೆರೆಗಳ ಜೀರ್ಣೋದ್ದಾರ ಕಾರ್ಯವು ಪ್ರಾರಂಭವಾಗಬೇಕು. ಯಾವ ನದಿಯಿಂದ ಡಾ.ಯಡ್ಯೂರಪ್ಪನವರು ಬೈಪಾಸ್ ಮಾಡುತ್ತಾರೊ ಇದು ಅವರ ವಿವೇಚನೆಗೆ ಬಿಟ್ಟದ್ದು. ನನಗೆ ಕಂಡುಬರುವಂತೆ ನೇತ್ರಾವತಿ ನದಿಯಲ್ಲದೆ ಬೇರೆ ಮಾರ್ಗ ಅವರಿಗಿಲ್ಲ ಅಥವಾ ಮೂರು ಕೋಟಿ ಜನರನ್ನು ಇನ್ನು ೧೦ ವರ್ಷಗಳಲ್ಲಿ ನೀರಿರುವ ಜಾಗಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು. ಬರಪೀಡಿತ ಜಿಲ್ಲೆಯ ಜನ ಮೊಸಳೆ ಕಣ್ಣೀರಿನ ಜಾಣ ಉಪಾಯಗಳನ್ನು ರಾಜಕಾರಣಿಗಳು ಹಾಗು ಪರಿಸರವಾದದ ಸೋಗಿನಲ್ಲಿರುವ ಬುದ್ಧಿಜೀವಿಗಳಿಂದ ಪದೇ ಪದೇ ಕೇಳಿ ಬೇಸತ್ತಿದ್ದಾರೆ. ಬಣ್ಣದ ಕನಸೊ, ನನಸಾಗದ ಕನಸೊ ಆದರೆ ನೇತ್ರಾವತಿಯ ತಿರುವೇ ಶಿವ ಶಿವ ಅಥವಾ ದುಸ್ಸಾಹಸ ಎನ್ನುವವರ ದುಃಸ್ವಪ್ನ ಬರಪೀಡಿತ ಜನರಿಗೆ ಬೀಳದಿರಲಿ ಎಂದು ಆಶಿಸುತ್ತೇನೆ.

Friday, June 4, 2010

ಬರಲಿದೆ ಕಾರ್ಬನ್ ಕ್ರೆಡಿಟ್ ಕಾರ್ಡ್ ಅಥವಾ ಇಂಗಾಲವನ್ನು ಇಳಿಸಿ-ಪರಿಸರವನ್ನು ಉಳಿಸಿ



ಜೂನ್ 5- ಇಂದು ವಿಶ್ವ ಪರಿಸರ ದಿನ. ಅದಕ್ಕಾಗಿ ಈ ವಿಶೇಷ ಲೇಖನ. ಈ ಲೇಖನವನ್ನು ಈ ದಿನದ (05/06/2010) 'ವಿಜಯ ಕರ್ನಾಟಕ'ದಲ್ಲೂ ಓದಬಹುದು.

ಪರಿಸರ ವಿಜ್ಞಾನಿಗಳ ಪ್ರಕಾರ ಇಂಗಾಲದ ಡೈ ಆಕ್ಸೈಡ್ ಹಾಗೂ ಹಸಿರು ಮನೆ ಅನಿಲಗಳು ತಡೆಯಿಲ್ಲದೆ ಹೆಚ್ಚುವರಿಯಾದರೆ ಧೀರ್ಘಾವದಿ ಸರಾಸರಿ ಜಾಗತಿಕ ತಾಪಮಾನ ೧೪ ಡಿಗ್ರಿ ಸೆಲ್ಶಿಯಸ್‌ನಿಂದ ೨೦೯೯ರ ವೇಳೆಗೆ ೨೦.೧ ಡಿಗ್ರಿ ಸೆಲ್ಶಿಯಸ್‌ಗೆ ಹೆಚ್ಚಲಿದೆ. ೧೭೯೦ ಹಾಗು ೨೦೧೦ರ ಅವಧಿಯಲ್ಲಿ ಪರಿಸರದಲ್ಲಿ ಇಂಗಾಲ ಶೇ. ೩೩%ರಷ್ಟು ಹಾಗೂ ಮಿಥೇನ್ ಅನಿಲ ಶೇ. ೧೪೯ರಷ್ಟು ಹೆಚ್ಚಿದೆ. ಹಸಿರು ಮನೆ ಅನಿಲಗಳಲ್ಲಿ ಇಂಗಾಲವಲ್ಲದೆ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಹೈಡ್ರೋಫ್ಲೂರೊ ಕಾರ್ಬನ್ ಅನಿಲಗಳಿವೆ. ಅನಿಯಂತ್ರಿತ ಕೈಗಾರಿಕೆ, ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ವಿದ್ಯುತ್ ಉತ್ಪಾದನೆ, ಹಳೆ ತಂತ್ರಜ್ಞಾನದಿಂದ ನಡೆಯುವ ಕೈಗಾರಿಕೆಗಳಿಂದ ಹಾಗೂ ಸಾರಿಗೆ ವಾಹನಗಳಿಂದ (ವಿಮಾನ ಹಾಗೂ ಹಡಗುಗಳು), ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಅವೈಜ್ಞಾನಿಕ ವ್ಯವಸಾಯದಿಂದ, ಕೊಳಚೆ ನಿರ್ಮೂಲನದಲ್ಲಿರುವ ಅವ್ಯವಸ್ಥೆಯಿಂದ ಹಸಿರು ಮನೆ ಅನಿಲಗಳ ಅಂಶ ಹೆಚ್ಚುತ್ತಿದೆ. ಪರಿಸರದಲ್ಲಿರುವ ಶೇ. ೮೦ರಷ್ಟು ಇಂಗಾಲ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದರೆ ಇನ್ನು ಶೇ. ೨೦ರಷ್ಟು ಅರಣ್ಯ ನಾಶದಿಂದ ಸೇರುತ್ತಿದೆ. ಪರಿಸರದಲ್ಲಿ ಶೇಖರವಾಗುವ ಈ ಅನಿಲಗಳು ಇನ್‌ಫ್ರಾರೆಡ್ ಕಿರಣಗಳನ್ನು ಭೂಮಿಯಲ್ಲಿ ಹಿಡಿದಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಏರುವುದಲ್ಲದೆ, ಹಿಮಗಲ್ಲುಗಳು ಕರಗುವುದರಿಂದ ಬರಗಾಲ ಹಾಗು ಪ್ರವಾಹಗಳು ಸಂಭವಿಸಲಿವೆ. ಮಾರ್ಚ ೨೦೧೦ರ ಜಾಗತಿಕ ತಾಪಮಾನ ೧೪.೫೪ ಡಿಗ್ರಿ ಸೆಲ್ಶಿಯಸ್, ಅಂದರೆ ಕಳೆದ ೧೩೦ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳು ಎಂದು ದಾಖಲೆ ಮಾಡಿದೆ. ಡಿಸೆಂಬರ್೨೦೦೯ರ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಜಾಗತಿಕ ತಾಪಮಾನ ೨ ಡಿಗ್ರಿ ಸೆ.ಗಿಂತ ಹೆಚ್ಚಾಗದೆ ಇರುವಂತೆ ನಿರ್ಣಯವನ್ನು ಅಂಗೀಕರಿಸಿತು. ವಿಮರ್ಶಕರ ಪ್ರಕಾರ ಈ ಸಮಾವೇಶ ಅಮೆರಿಕ ಹಾಗೂ ಚೀನಾ ದೇಶಗಳ ಸಂಕುಚಿತ ಮನೋಭಾವದಿಂದ ಪರಿಸರಕ್ಕೆ ಧಕ್ಕೆ ತರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ವಿಫಲವಾದರೂ, ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳು ಈ ಅನಿಲಗಳನ್ನು ನಿಯಂತ್ರಿಸುವ ಬಗ್ಗೆ ತಮ್ಮ ದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ.
ವಿಶ್ವದ ಶೇ. ೩೩ ಇಂಗಾಲವನ್ನು ಅಮೆರಿಕ, ಶೇ.೨೩ನ್ನು ಯೂರೋಪಿಯನ್ ಯೂನಿಯನ್ ದೇಶಗಳು, ಶೇ. ೮ ಚೈನಾ, ಶೇ. ೬ ಜಪಾನ್, ಶೇ.೪ನ್ನು ಭಾರತ ದೇಶ ಹೊರಸೂಸಿದರೆ ಇನ್ನುಳಿದ ಶೇ.೩೩ ಇಂಗಾಲವನ್ನು ಇತರೆ ದೇಶಗಳು ಹೊರಸೂಸುತ್ತಿವೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಶೇ.೭೦ರಷ್ಟು ಇಂಗಾಲವನ್ನು ಹೊರಸೂಸುತ್ತಿವೆ. ಇತ್ತೀಚೆಗೆ ಚೀನಾ ಹಾಗು ಭಾರತ ತ್ವರಿತ ರೀತಿಯಲ್ಲಿ ಮುಂದುವರಿಯುತ್ತಿರುವುದರಿಂದ ಹಾಗೂ ಕೈಗಾರಿಕೋತ್ಪಾದನೆ ಹೆಚ್ಚಿರುವುದರಿಂದ, ಅಭಿವೃದ್ಧಿಶೀಲ ರಾಷ್ಟ್ರಗಳಂತೆ ಅಡಿವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಬೇಕಾಗಿರುವುದರಿಂದ ಈ ದೇಶಗಳು ಸಹ ಹೆಚ್ಚು ಇಂಗಾಲವನ್ನು ಹೊರಸೂಸಲು ಪ್ರಾರಂಭಿಸಿವೆ. ವಿಶ್ವದ ಕೇವಲ ಶೇ. ೪.೫೩ರಷ್ಟು ಜನಸಂಖ್ಯೆ ಹೊಂದಿರುವ ಅಮೆರಿಕಾ ಜಾಗತಿಕ ತಾಪಮಾನ ಹೆಚ್ಚಾಗಲು ಬಹುಮುಖ್ಯ ಕಾರಣವಾಗಿದೆ. ನಾಮಕಾವಸ್ಥೆಗೆ ೧೯೯೭ರಲ್ಲಿ ಜಪಾನಿನ ಕ್ಯೋಟೊನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಮಂಡಿಸಿದ ಕ್ಯೋಟೊ ಪ್ರೊಟೊಕಾಲ್‌ಗೆ ಅಮೆರಿಕಾ ಸಹಿ ಹಾಕಿದ್ದರೂ, ಇದನ್ನು ತನ್ನ ದೇಶದಲ್ಲಾಗಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನಾಗಿ ಪರಿವರ್ತಿಸುವಲ್ಲಿ ವಿಫಲವಾಗಿದೆ. ಎಲ್ಲ ರಾಷ್ಟ್ರಗಳ ಪೈಕಿ ಕೇವಲ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಕ್ಯೋಟೊ ಪ್ರೊಟೊಕಾಲನ್ನು ಶಿಸ್ತಿನಿಂದ ಪಾಲಿಸುತ್ತಿವೆ. ಕ್ಯೋಟೊ ಪರಿಸರ ನಿಯಮಾವಳಿಯ ಪ್ರಕಾರ ಪ್ರತಿ ರಾಷ್ಟ್ರಕ್ಕೆ ಒಂದು ವರ್ಷಕ್ಕೆ ನಿರ್ದಿಷ್ಟ ಇಂಗಾಲವನ್ನು ಹೊರಸೂಸುವ ಮಿತಿಯಿರುತ್ತದೆ. ಈ ಮಿತಿಯು ನಿವ್ವಳ ಗೃಹ ಉತ್ಪನ್ನ (ಜಿ.ಡಿ.ಪಿ), ಜನಸಂಖ್ಯೆ ಹಾಗೂ ಕೈಗಾರಿಕೋತ್ಪನ್ನ ಆಧಾರಿತವಾಗಿರುತ್ತದೆ.
ಪ್ರತಿ ರಾಷ್ಟ್ರವು ತನಗೆ ದೊರೆತಿರುವ ಇಂಗಾಲ ಹೊರಸೂಸುವ ಮಿತಿಯೊಳಗೆ ಕೆಲಸ ಮಾಡಬೇಕು. ಹಾಗೆಂದು ದೇಶದ ಆರ್ಥಿಕತೆಗೆ ಧಕ್ಕೆ ಬರದಂತೆ ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ, ಕೈಗಾರಿಕೆಯಲ್ಲಿ, ವ್ಯವಸಾಯ ವಿಧಾನಗಳಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿ ಮತ್ತು ಕೊಳಚೆ ನಿರ್ಮೂಲನದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಕಾರ್ಖಾನೆಗೆ ಇಂಗಾಲದ ಮಿತಿಯನ್ನು ನಿಗದಿಗೊಳಿಸಲಾಗುತ್ತದೆ. ಉದಾಹರಣೆಗೆ ಟೊಯೋಟೊ ಕಾರ್ಖಾನೆಯು ೧೦,೦೦೦ ಕಾರುಗಳ ಉತ್ಪಾದನೆಗೆ ಪ್ರತಿ ವರ್ಷ ೧೦೦,೦೦೦ ಟನ್ ಇಂಗಾಲವನ್ನು ಹೊರಸೂಸಿದರೆ, ಸರ್ಕಾರ ಕೇವಲ ೮೦,೦೦೦ ಟನ್ ಇಂಗಾಲದ ಮಿತಿಯನ್ನು ಅದರ ಮೇಲೆ ಹೇರಿದರೆ, ಈ ಕಾರ್ಖಾನೆ ತನ್ನ ಉತ್ಪಾದನೆಯನ್ನು ಉಳಿಸಿಕೊಳ್ಳಲು ಅಥವಾ ಉತ್ಪಾದನೆಯನ್ನು ಹೆಚ್ಚಿಸಲು ನೂತನ ತಂತ್ರಜ್ಞಾನವನ್ನು ಅಳವಡಿಸಿ ತನಗೆ ದೊರೆತಿರುವ ಕಾರ್ಬನ್ ಕ್ರೆಡಿಟ್ ಮಿತಿಯೊಳಗೆ ಕೆಲಸಮಾಡಬೇಕಾಗುತ್ತದೆ. ಹಾಗಾಗದಿದ್ದಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಬೇರೆ ಕಾರ್ಖಾನೆಯಿಂದ ಕಾರ್ಬನ್ ಕ್ರೆಡಿಟ್ ಅನ್ನು ಕೊಂಡುಕೊಳ್ಳಬೇಕು ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಯೋಜನೆಗಳಿಗೆ ಪ್ರೋತ್ಸಾಹಿಸಿ ಕಾರ್ಬನ್ ಕ್ರೆಡಿಟ್ ಪಡೆಯಬಹುದು. ಈಗಾಗಲೆ ೫ ಅಂತರರಾಷ್ಟ್ರೀಯ ಸಂಸ್ಥೆಗಳು ಕಾರ್ಬನ್ ಕ್ರೆಡಿಟ್ ವ್ಯಾಪಾರದಲ್ಲಿ ತೊಡಗಿವೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಪ್ರತಿ ವರ್ಷ ಬೆಳೆಯುತ್ತಿದೆ. ವಿಶ್ವ ಸಂಸ್ಥೆಯ ಯು.ಎನ್.ಎಫ್.ಸಿ.ಸಿ. ಸಂಸ್ಥೆಯು ಕಾರ್ಬನ್ ಕ್ರೆಡಿಟ್‌ನ ಎಲೆಕ್ಟ್ರಾನಿಕ್ ಪ್ರಮಾಣಪತ್ರಗಳನ್ನು ಸಂಸ್ಥೆಗಳ ಇಂಗಾಲ ಹೊರಸೂಸುವ ಆಧಾರದ ಮೇಲೆ ವಿತರಿಸುತ್ತದೆ. ೧ ಟನ್ ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೫ರಿಂದ ೨೦ ಯೂರೋ ಡಾಲರುಗಳ ಬೆಲೆಯಿದೆ. ಇತ್ತೀಚೆಗೆ ಬಾರತದ ಜಿಂದಾಲ್ ಕಾರ್ಖಾನೆಯು ಸ್ಟೀಲ್ ತಯಾರಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ವರ್ಷಕ್ಕೆ ೧.೫ ಕೋಟಿ ಟನ್ ಕಡಿಮೆ ಇಂಗಾಲವನ್ನು ಹೊರಸೂಸುತ್ತಿರುವುದರಿಂದ ೨೨೫ ಮಿಲಿಯನ್ ಯೂರೊ ಡಾಲರುಗಳ ಮೌಲ್ಯದ ಕಾರ್ಬನ್ ಕ್ರೆಡಿಟ್ ಗಳಿಸುತ್ತಿದೆ. ಈ ಕಾರ್ಖಾನೆ ಪರಿಸರ ಸ್ನೇಹಿಯಾಗಿರುವುದಲ್ಲದೆ ಹಣವನ್ನು ಗಳಿಸುತ್ತಿದೆ. ಇದೆ ರೀತಿ ಯಾವುದಾದರೂ ಕೈಗಾರಿಕೆ ನಗರ ಪ್ರದೇಶದ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲವನ್ನು ಬಳಸಿ ಡೀಸಲ್ ಉತ್ಪಾದಿಸಿ ಅದನ್ನು ತನ್ನ ಕಾರ್ಖಾನೆಗೆ ಬಳಿಸಿಕೊಂಡರೆ ಅದಕ್ಕೂ ಕಾರ್ಬನ್ ಕ್ರೆಡಿಟ್ ದೊರೆಯುತ್ತದೆ. ಇದಲ್ಲದೆ ನೀರಿಲ್ಲದ ಬರಪೀಡಿತ ಜಿಲ್ಲೆಗಳಲ್ಲಿ ಬಯೋಡೀಸಲ್‌ಗೆ ಬೇಕಾಗುವ ಜತ್ರೋಪ ಸಸಿಗಳನ್ನು ಬೆಳೆಸುವುದರಿಂದ ರೈತರ ಜೀವನೋಪಾಯವಾಗುವುದರ ಜೊತೆಗೆ ಇದರ ಬೀಜಗಳನ್ನು ಖರೀದಿಸುವ ಇಂಡಿಯನ್ ಪೆಟ್ರೋಲಿಯಮ್ ಸಂಸ್ಥೆಗಳು ಕಾರ್ಬನ್ ಕ್ರೆಡಿಟ್‌ನಿಂದ ಹಣ ಸಂಪಾದಿಸಬಹುದು. ಸದ್ಯಕ್ಕೆ ಯೂರೋಪಿಯನ್ ರಾಷ್ಟ್ರಗಳ ಕಾರ್ಖಾನೆಗಳು ಮಾತ್ರ ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ ಕ್ಯೋಟೊ ಪ್ರೋಟೊಕಾಲ್ ತರಹ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಕಡ್ಡಾಯ ಅಂತರರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ಕಾರ್ಬನ್ ಕ್ರೆಡಿಟ್ ವಿಶ್ವದ ಪ್ರತಿಯೊಂದು ಉದ್ಯಮದ ಮೇಲೂ ಪರಿಣಾಮ ಬೀರಲಿದೆ.
೫ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೇ.೨೬ರಷ್ಟು ತಗ್ಗಿಸುವುದಾಗಿ ಭಾರತ ಜನವರಿ ೨೦೧೦ರಲ್ಲಿ ವಿಶ್ವಸಂಸ್ಥೆಗೆ ಭರವಸೆ ನೀಡಿದೆ. ಹಾಗಾಗಿ ನಾವು ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ಅನುಸರಿಸಬೇಕಾಗಿದೆ. ಇಂಗಾಲವನ್ನು ನಿಯಂತ್ರಿಸಲು ಇರುವ ವಿಧಾನಗಳೆಂದರೆ ಕಾರ್ಬನ್ ಪ್ರಾಜೆಕ್ಟ್ಸ್, ಕಾರ್ಬನ್ ಕ್ರೆಡಿಟ್ಸ್, ಕಾರ್ಬನ್ ಫಾರ್ಮಿಂಗ್ ಹಾಗು ಕಾರ್ಬನ್ ಟ್ಯಾಕ್ಸಿಂಗ್.
ಕಾರ್ಬನ್ ಪ್ರಾಜೆಕ್ಟ್ಸ್ - ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳಿಂದ ಶೇ.೬೮ರಷ್ಟು ವಿದ್ಯುತ್ ತಯಾರಾಗುತ್ತಿದ್ದರೆ, ಜಲಶಕ್ತಿಯಿಂದ ಶೇ.೨೧, ನವೀಕರಿಸಬಹುದಾದ ಶಕ್ತಿಗಳಿಂದ ಶೇ.೭ ಹಾಗು ಅಣು ಶಕ್ತಿಯಿಂದ ಶೇ.೪ ವಿದ್ಯುತ್ ತಯಾರಿಸಲಾಗುತ್ತಿದೆ. ತಯಾರಾಗುವ ವಿದ್ಯುತ್‌ನಲ್ಲಿ ಶೇ.೩೦ ರಿಂದ ಶೇ.೪೫ ವಿದ್ಯುತ್ ಸೋರಿಕೆಯಿಂದ ಅಥವಾ ವಿದ್ಯುತ್ ಕಳ್ಳ ಸಾಗಾಣಿಕೆಯಿಂದ ನಷ್ಟವಾಗುತ್ತಿದೆ. ಪ್ರಸ್ತುತ ೧೪೯,೦೦೦ ಮೆ.ವ್ಯಾ. ವಿದ್ಯುತ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದರೆ ೨೦೩೦ರ ವೇಳೆಗೆ ೯೫೦,೦೦೦ ಮೆ.ವ್ಯಾ. ವಿದ್ಯುತ್ ಅವಶ್ಯಕತೆಯಿದೆ. ಇಂಗಾಲವನ್ನು ಕಡಿಮೆಗೊಳಿಸಬೇಕಾದರೆ ಅಥವಾ ಕಾರ್ಬನ್ ಕ್ರೆಡಿಟ್ ಅಂತಾರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ನಮ್ಮ ದೇಶದ ಪ್ರಗತಿಯನ್ನು ಕಾಯ್ದು ಕೊಳ್ಳಲು ನಾವು ಯಥೇಚ್ಛವಾಗಿ ದೊರೆಯುವ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ ಹಾಗೂ ಜೈವಿಕ‌ಇಂಧನಗಳನ್ನು (ಬಯೋಡೀಸೆಲ್) ಬಳಸಿ ಹೆಚ್ಚು ವಿದ್ಯುತ್ ತಯಾರಿಸಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಪ್ರತಿಯೊಂದು ದಾರಿ ದೀಪವನ್ನು ಸೌರಶಕ್ತಿಯಿಂದಲೇ ಉರಿಸಬಹುದು. ಗ್ರಾಮಗಳಲ್ಲಿ ಬಯೋಗ್ಯಾಸನ್ನು ಹಾಗೂ ನಗರಗಳಲ್ಲಿರುವ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲದಿಂದ ವಿದ್ಯುತ್ತನ್ನು ತಯಾರಿಸಬೇಕು. ಅಲ್ಲದೆ ಅಣು ಒಪ್ಪಂದದಂತೆ ಇನ್ನು ೧೦ ವರ್ಷಗಳಲ್ಲಿ ಉತ್ಪಾದಿಸುತ್ತಿರುವ ಅಣುವಿದ್ಯುತ್ತನ್ನು ಶೇ.೧೦ರಿಂದ ಶೇ.೨೦ಕ್ಕೆ ಏರಿಸಬೇಕು. ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ಆದಷ್ಟು ಕಡಿಮೆ ವಿದ್ಯುತ್ತನ್ನು ಉತ್ಪಾದಿಸಬೇಕು. ಜತ್ರೋಪ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಬಯೊಡೀಸಲ್ ತಯಾರಿಸುವುದಲ್ಲದೆ ಕಾರ್ಬನ್ ಕ್ರೆಡಿಟ್ ಸಹ ಪಡೆಯಬಹುದು.
ಕಾರ್ಬನ್ ಕ್ರೆಡಿಟ್ಸ್- ಹಳೆಯ ತಂತ್ರಜ್ಞಾನದಿಂದ ನಡೆಯುತ್ತಿರುವ ಕೈಗಾರಿಕೆಗಳಿಗೆ ಸರ್ಕಾರ ಅನುದಾನ ನೀಡಿ ಅವುಗಳನ್ನು `ಇಂಗಾಲ ಸ್ನೇಹಿ' ಕೈಗಾರಿಕೆಗಳಾಗಿ ಪರಿವರ್ತಿಸಬೇಕು, ಪ್ರತಿ ಕೈಗಾರಿಕೆಗೆ ಇಂಗಾಲದ ಮಿತಿಯನ್ನು ಜಾರಿಗೆ ತರಬೇಕು. ಇದನ್ನು ತಲುಪಲಾರದಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮರಗಳನ್ನು ಬೆಳೆಸುವುದರೊಂದಿಗೆ ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯನ್ನು ನಿಭಾಯಿಸಬೇಕು.
ಕಾರ್ಬನ್ ಫಾರ್ಮಿಂಗ್- ನಮ್ಮ ದೇಶದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಮಾಡುವಲ್ಲಿ ನಮ್ಮ ರೈತರದು ಮಹತ್ತರ ಪಾತ್ರವಿದೆ. ಪ್ರತಿಯೊಬ್ಬ ರೈತನಿಗೆ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಲು ಸರ್ಕಾರ ಹಣವನ್ನು ಕೊಡಬೇಕು- ಅದು ಫಸಲು ಕೊಡುವ ಮಾವಿನ ಮರವಾಗಿರಬಹುದು ಅಥವಾ ತಂಪು ಕೊಡುವ ಹೊಂಗೆ ಮರವಾಗಿರಬಹುದು. ಪ್ರತಿಯೊಂದು ಮರಕ್ಕೆ ವರ್ಷಕ್ಕೆ ಇಂತಿಷ್ಟು ಬಾಡಿಗೆಯೆಂದು ಸರ್ಕಾರ ಪಾವತಿಸಬೇಕು. ಯಾವುದೇ ಮರ ಕಡಿದರೂ ಜಾಮೀನು ನೀಡಲಾಗದ ಅರೆಸ್ಟ್ ವಾರೆಂಟ್ ಜಾರಿಗೊಳಿಸಬೇಕು. ಇಂದಿಗೂ ಶೇ.೯೦ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೀರು ಕಾಯಿಸಲು ಹಾಗು ಅಡಿಗೆ ಮಾಡಲು ಸೌದೆಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮರಗಳು ನಾಶವಾಗುವುದಲ್ಲದೆ ಹೊಗೆಯಿಂದ ಇಂಗಾಲವು ಹೊರಸೂಸುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ಒಲೆಗಳನ್ನು ಹಾಗೂ ಅಡಿಗೆಗೆ ಬಯೋಗ್ಯಾಸ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇಂಗಾಲವನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸಾಯ ಪದ್ಧತಿಗಳ ಬಗ್ಗೆ ರೈತರಿಗೆ ವಿವರಿಸಿ ಹೇಳಬೇಕು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೊರಕುವ ವಿಶ್ವಸಂಸ್ಥೆಯ ಸಬ್ಸಿಡಿಯನ್ನು ರೈತರಿಗೆ ತಲುಪಿಸಬೇಕು. ಈಗಿರುವ ನರೇಗಾ (ಓಂಖ‌ಇ‌ಉಂ), ಆಹಾರ ಸುರಕ್ಷತೆ ಕಾರ್ಯಕ್ರಮಗಳ ಜೊತೆ ಇಂಗಾಲ ತಗ್ಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಅಥವಾ ಫೀಡ್ (ಈ‌ಇ‌ಇ‌ಆ) ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಮೂರು ಕಾರ್ಯಕ್ರಮಗಳನ್ನು ಜೋಡಿಸಿ ಆಹಾರ (ಫುಡ್), ಶಕ್ತಿ (ಎನರ್ಜಿ), ಪರಿಸರ (ಎನವಿರಾನ್‌ಮೆಂಟ್) ಮತ್ತು ಅಭಿವೃದ್ಧಿ (ಡೆವೆಲಪಮೆಂಟ್) ಕಾಯಕ್ರಮವನ್ನು ರೂಪಿಸಬಹುದು.
ಕಾರ್ಬನ್ ಟ್ಯಾಕ್ಸಿಂಗ್- ಖಾಸಗಿ ಸಾರಿಗೆ, ಸರ್ಕಾರಿ ಸಾರಿಗೆ, ವಿಮಾನ ಸಾರಿಗೆ ಕಂಪನಿಗಳ ಮೇಲೆ ಇಂಗಾಲ ತೆರಿಗೆಯನ್ನು ವಿಧಿಸಬೇಕು. ಅನಗತ್ಯವಾಗಿ ಹೆಚ್ಚು ಇಂಗಾಲವನ್ನು ಹೊರಸೂಸುವ ಎಲ್ಲ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟುವ ಪ್ರತಿ ಚದರ ಅಡಿಗೆ ಇಂಗಾಲ ತೆರಿಗೆ ವಿಧಿಸಬೇಕು. ನಗರಗಳಲ್ಲಿರುವ ಎಲ್ಲ ಕಛೇರಿಗಳು ಶಕ್ತಿ ಸಮರ್ಥವಾಗಿ (ಎನರ್ಜಿ ಎಫಿಷಿಯೆಂಟ್) ಪರಿವರ್ತನೆಯಾಗಬೇಕು ಇಲ್ಲದಿದ್ದಲ್ಲಿ ಅವು ಇಂಗಾಲ ತೆರಿಗೆಯನ್ನು ಪಾವತಿಮಾಡಬೇಕು.
ಇಂದು ವಿಶ್ವ ಪರಿಸರ ದಿನ. ಪ್ರತಿಯೊಬ್ಬ ಪ್ರಜೆಯು ತನ್ನ ದಿನ ನಿತ್ಯದ ಬದುಕಿನಲ್ಲಿ ಇಂಗಾಲವನ್ನು ಇಳಿಸಲು ಪ್ರಯತ್ನಿಸಬಹುದು. ಅನಗತ್ಯ ವಿದ್ಯುತ್ ಬಳಕೆ, ನೀರಿನ ದುರ್ಬಳಕೆ, ಅನಗತ್ಯ ಕಾಗದ ಅಥವಾ ಪ್ಲಾಸ್ಟಿಕ್ ಬಳಕೆ, ಅನಗತ್ಯ ವಾಹನಬಳಕೆ ಮುಂತಾದವುಗಳನ್ನು ನಿಲ್ಲಿಸಬೇಕು. ನಮ್ಮ ದಿನನಿತ್ಯದ ಪ್ರತಿಯೊಂದು ಹೆಜ್ಜೆಯಲ್ಲಿ ನಾವು ಪರಿಸರ ಮಾಲಿನ್ಯವಾಗದಂತೆ ತಡೆಯಬಹುದು. ಮುಂದೊಂದು ದಿನ ಇಂಗಾಲ ಹೊರಸೂಸುವಿಕೆ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆಯೆಂದರೆ ವಿಶ್ವದ ಪ್ರತಿಯೊಬ್ಬ ಪ್ರಜೆಗೂ ಇಂಗಾಲ ಮಿತಿ ಬರಬಹುದು. ಹೇಗೆ ಒಂದು ಕೈಗಾರಿಕೆ ಅಥವಾ ಕಾರ್ಖಾನೆಗೆ ಇಂಗಾಲ ಮಿತಿ ಬರಲಿದೆಯೊ ಅದೇ ರೀತಿ ಮುಂದೊಂದು ದಿನ ಪ್ರತಿಯೊಂದು ಕುಟುಂಬಕ್ಕೆ ಇಂಗಾಲ ಮಿತಿ ಬರಬಹುದು. ಧೂಮಪಾನ ಮಾಡುವವರು ಮಾಡದೆ ಇರುವವರ ಬಳಿ ಕಾರ್ಬನ್ ಕ್ರೆಡಿಟ್ ಪಡೆಯಬೇಕಾಗುತ್ತದೆ. ಹೆಚ್ಚು ವಾಹನಗಳನ್ನಿಡಬೇಕೆಂದು ಬಯಸುವವರೂ ವಾಹನಗಳಿಲ್ಲದಿರುವವರ ಬಳಿ ಕಾರ್ಬನ್ ಕ್ರೆಡಿಟ್ ಪಡೆಯಬೇಕಾಗಬಹುದು. ಯಾವುದೇ ವಾಹನ ಖರೀದಿಸುವುದರ ಮೊದಲು ಮರಗಳನ್ನು ಪೋಷಿಸುತ್ತಿರುವ ಸಾಕ್ಷಿ ಪತ್ರವನ್ನು ತೋರಿಸಬೇಕಾಗಬಹುದು. ಹೈಸ್ಪೀಡ್ ಫ್ಯಾನ್ಸಿ ಕಾರುಗಳು ಅಥವಾ ಬೈಕುಗಳನ್ನು ಖರೀದಿಸುವವರು ಎರಡು ಪಟ್ಟು ಹೆಚ್ಚು ಹಣವನ್ನು ತೆರಿಗೆ ರೀತಿಯಲ್ಲಿ ಪಾವತಿಸಬೇಕಾಗಬಹುದು. ಅನಗತ್ಯವಾಗಿ ಖಾಸಗಿ ಪಾರ್ಟಿಗಳನ್ನು ಮಾಡುವವರು ಹಾಗೂ ಸಾವಿರಾರು ಮಂದಿಯನ್ನು ಮದುವೆ ಅಥವಾ ನಾಮಕರಣ ಅಥವಾ ಬಾಡು ಊಟಗಳಿಗೆ ಆಹ್ವಾನಿಸುವವರ ಮೇಲೆ ಕಾರ್ಬನ್ ತೆರಿಗೆ ಬೀಳಬಹುದು. ಹಾಗೆಯೇ ಮನುಷ್ಯ ಅಥವಾ ಪ್ರಾಣಿ ಸತ್ತ ಮೇಲೆ ಅದನ್ನು ಸುಡಬೇಕೋ ಅಥವಾ ಹೂಳಬೇಕೊ, ಯಾವುದರಿಂದ ಪರಿಸರಕ್ಕೆ ಹೆಚ್ಚು ಹಾನಿಕರ ಎಂಬ ವಾದ ವಿವಾದ ಅಥವಾ ಕಾನೂನು ಜಾರಿಗೆ ಪ್ರಯತ್ನಗಳು ನಡೆದರೂ ಸಹ ಆಶ್ಚರ್ಯ ಪಡಬೇಕಾಗಿಲ್ಲ. ವಿಶ್ವ ಪರಿಸರದ ದಿನಾಚರಣೆಯಾದ ಇಂದು ಮಿತ್ರರಿಗೆ ನನ್ನ ಸಂದೇಶ- ಇಂಗಾಲವನ್ನು ಇಳಿಸಿ, ಪರಿಸರವನ್ನು ಉಳಿಸಿ.
ಡಾ.ಮಧುಸೀತಪ್ಪ