Friday, June 4, 2010

ಶಿವಪ್ಪ ಕಾಯೋ ತಂದೆ, ಬಾಯಾರಿಕೆಯನ್ನು ತಾಳಲಾರೆ ಕಾಪಾಡೆಯ? ಶಿವನೇ.....!


ಇತ್ತೀಚೆಗೆ ನಾನು `ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ನೇತ್ರಾವತಿ ತಿರುವಿಗೆ ಸಂಬಂಧ ಪಟ್ಟಂತೆ ಲೇಖನವೊಂದನ್ನು ಬರೆದಿದ್ದೆ. ಅದಕ್ಕೆ ಸಂಬಂಧಪಟ್ಟಂತೆ ಮಿತ್ರ ಪತ್ರಕರ್ತ ವಿನಾಯಕ್ ಭಟ್ ಅವರು ಪ್ರತಿಕ್ರಿಯಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿನಾಯಕ್ ಅವರು ವ್ಯಕ್ತಪಡಿಸಿರುವ ಕೆಲವು ಬೇಸರ- ಕಳಕಳಿಗೆ ನನ್ನ ಕೈಲಾದಮಟ್ಟಿಗೆ ಉತ್ತರಿಸಲು ಪ್ರಯತ್ನಪಡುತ್ತೇನೆ. ಹಾಗೂ ಇದು ಮುಕ್ತವಾಗಿ ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗಲು ಅವಕಾಶ ದೊರದಂತಾಗಿದೆ. ಇದಲ್ಲದೆ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ಪರಮಶಿವಯ್ಯನವರ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಉತ್ತರ ಕೊಡಲು ಅವಕಾಶ ದೊರೆತಂತಾಗಿದೆ.
ನೇತ್ರಾವತಿ ನದಿಯ ಬೃಹತ್ ಮಳೆ ಕೊಯ್ಲು ಯೋಜನೆ ಜಾರಿಯ ಬಗ್ಗೆ ಹೋರಾಟ ನಡೆಸಿರುವ ಇಳಿವಯಸ್ಸಿನ ೯೧ ವರ್ಷದ `ಯುವಕ' ಡಾ.ಪರಮಶಿವಯ್ಯನವರ ಪರವಾಗಿ ನಾನು ಹೇಳ ಹೊರಟಿರುವುದಿಷ್ಟೇ- ದಕ್ಷಿಣ ಕನ್ನಡದ ಜೀವನದಿಯಾದ ನೇತ್ರಾವತಿ ದೇಶದಲ್ಲಿ ಉದ್ದವನ್ನು ಮಾತ್ರ ಪರಿಗಣಿಸಿದಲ್ಲಿ ಚಿಕ್ಕ ನದಿಯಾಗಿರ ಬಹುದು. ಆದರೆ ಇದರಲ್ಲಿರುವ ನೀರಿನ ಪ್ರಮಾಣವು ನಾಲ್ಕು ರಾಜ್ಯಗಳಿಗೆ ನೀರುಣಿಸುವ ಕಾವೇರಿ ನದಿಗಿಂತ ಹೆಚ್ಚು. ಇದು ಸೂರ್ಯನ ಬೆಳಕು ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಡಿನ ಹಸಿರಿನಷ್ಟೇ ನಿಚ್ಚಳ ಸತ್ಯ!! ಪಾಣಿ ಮಂಗಳೂರಿನ ಮಾಪನದ ಅಂಕಿ ಅಂಶಗಳ ಅನ್ವಯ ಈ ನದಿಯಿಂದ ಸರಿಸುಮಾರು ೪೪೦ ಟಿ‌ಎಂಸಿ ನೀರು ಸಮುದ್ರದತ್ತ ದಾಪುಗಾಲು ಹಾಕುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿರುವ ಅನೇಕ ಹಳ್ಳ-ಕೊಳ್ಳಗಳಿಂದ ೭೫ ಟಿ‌ಎಂಸಿಯಷ್ಟು ನೀರು ಇದರ ಜೊತೆಯಾಗುತ್ತದೆ. ಅಂದರೆ ಒಟ್ಟಾರೆ ೫೧೫ ಟಿ‌ಎಂಸಿ ನೀರು ಸಮುದ್ರದ ತೆಕ್ಕೆಯಲ್ಲಿ ಕರಗುತ್ತದೆ! ಇದು ಕರ್ನಾಟಕ ನೀರಾವರಿ ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿ (ನನ್ನ ಬಳಿ ಸಾಕ್ಷಿ ಇದೆ).
ಇಲ್ಲಿ ನಾನು ಮತ್ತೊಂದು ಸಂಗತಿಯನ್ನು ಸ್ಪಷ್ಟ ಪಡಿಸಲು ಇಷ್ಟ ಪಡುತ್ತೇನೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ. ಹೇಗೆ ಮನುಷ್ಯನಿಗೆ ತನ್ನ ದೇಹದಲ್ಲಾಗುವ ಸಣ್ಣಪುಟ್ಟ ಶಾರೀರಿಕ ಏರುಪೇರನ್ನು ಸಹಿಸಿಕೊಳ್ಳುವ ವ್ಯವಸ್ಥೆ ಇದೆಯೋ ಅದೆ ರೀತಿ ಪರಿಸರದ ವ್ಯವಸ್ಥೆಯಲ್ಲೂ ಇಂತಹ ಸಣ್ಣಪುಟ್ಟ ಏರುಪೇರನ್ನು ಸಹಿಸಿಕೊಳ್ಳಲು ವ್ಯವಸ್ಥೆ ಇದೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಬದುಕಬಲ್ಲ ಜೀವರಾಶಿಗೆ ಹಾಗು ಔಷದೀಯ ಸಸ್ಯರಾಶಿಗೆ ತೊಂದರೆಯಾಗುವ ಆತಂಕ- ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ. ಉಳಿದ ಶೇ.೯೦ ಜಲಾಯನ ಪ್ರದೇಶಲ್ಲಿ ವರ್ಷದ ೧೫೦ ದಿನಗಳಲ್ಲಿ ಕನಿಷ್ಠ ೪೪೦೦ ಮಿಮೀ ಮಳೆ ಬೀಳುವುದರಿಂದ ಜೀವರಾಶಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪರಿಸರವಾದದಲ್ಲಿ ಪ್ರಾಣಿ, ಸಸ್ಯಗಳ ಸುರಕ್ಷತೆಯ ಬಗ್ಗೆ ಒಂದು ವಾದವಾದರೆ ಮಾನವ ಸುರಕ್ಷತೆಯ ಬಗ್ಗೆ ಇನ್ನೊಂದು ವಾದ. ಮಾನವ ಜಾತಿ ಅತಿ ಬುದ್ಧಿಜೀವಿಯಾಗಿರುವುದರಿಂದ ನಾವು ತೆಗೆದುಕೊಳ್ಳುವ ನಿರ್ಣಯಗಳಿಂದ ಇತರೆ ಜೀವರಾಶಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಒಂದು ಕಡೆ ನಮ್ಮ ವಾದ ವಾಲುವುದು ಸರಿಯಲ್ಲ. ಏಕೆಂದರೆ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲ ಪ್ರಜೆಗಳಿಗೂ ಇತರೆ ಜೀವರಾಶಿಯೊಡನೆ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ.

೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.
ಅರಣ್ಯನಾಶದ ಬಗ್ಗೆ ಆತಂಕ- ಇದುವರೆಗೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಆಗಿರುವ ಅರಣ್ಯ ನಾಶಗಳ ಕೆಲವು ವಿವರಗಳು ಈ ಮುಂದೆ ಕೊಡಲಾಗಿದೆ. ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.

ಶೋಲಾ ಅರಣ್ಯದ ನಾಶ- ಕೆಲವು ಪರಿಸರವಾದಿಗಳ ಪ್ರಕಾರ ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಮಾರ್ಶ್‌ಲ್ಯಾಂಡ್ಸ್ ಹಾಗೂ ನೀರಾವರಿ ಭೂಮಿಗಳು ಮಳೆಯ ನೀರನ್ನು ಸ್ಪಂಜಿನಂತೆ ಹೀರಿ ಭೂಮಿಯ ಒಳ ಪದರಗಳಲ್ಲಿರುವ ಕಾಲುವೆಗಳಿಗೆ ನೀರನ್ನು ಒದಗಿಸುವುದರ ಮೂಲಕ ಸಣ್ಣ ನೀರಿನ ಝರಿಗಳಿಗೆ ಕಾರಣವಾಗುತ್ತದೆ. ೧೦೩೦ ಮೀಟರ್ ಎತ್ತರದಲ್ಲಿ ಈ ಯೋಜನೆಯಲ್ಲಿ ಮಳೆ ಕೊಯ್ಲು ಮಾಡುವುದರಿಂದ ಈ ಪರಿಸರ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ವಾದವಿದೆ. ಈ ಯೋಜನೆಯಲ್ಲಿ ರನ್ ಆಫ್ ವಾಟರ್ ಅಥವಾ ಭೂಮಿಯ ಮೇಲೆ ಬಿದ್ದು ಹರಿದು ಹೋಗುವ ನೀರನ್ನು ಕೊಯ್ಲು ಮಾಡುವುದರಿಂದ, ಸ್ಪಂಜ್‌ಗಳಂತೆ ವರ್ತಿಸುವ ವೆಟ್‌ಲ್ಯಾಂಡ್‌ಗಳಿಗೆ ಅಥವಾ ಸಣ್ಣ ಝರಿಗಳ ಉತ್ಪಾದನೆಗೆ ಯಾವುದೇ ಧಕ್ಕೆಯಾಗುವುದಿಲ್ಲ.

ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್
ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ.

ಪಶ್ಚಿಮ ಘಟ್ಟದಂತಹ ಅಪೂರ್ವ ಸಂಪತ್ತು ಹೊಂದಿರುವ ಈ ಜಿಲ್ಲೆಗಳು ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿವೆ, ಅದರ ಬಗ್ಗೆ ನಮಗೂ ಕಾಳಜಿ ಇದೆ. ಇತ್ತೀಚೆಗೆ ೬೦,೦೦೦ ಜನಸಂಖ್ಯೆ ಇರುವ ಕುಂದಾಪುರಕ್ಕೆ ಸರ್ಕಾರ ೫೦ ಕೋಟಿ ಕೊಟ್ಟಿರುವುದು ಸ್ವಾಗತಾರ್ಹ. ಅಂದರೆ ಪ್ರತಿ ತಲೆಗೆ ೮,೦೦೦ ರೂಗಳು. ಇದರ ಆಧಾರಿತ ೬೦ ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ೫೦೦೦ ಕೋಟಿಗಳನ್ನು ಮಂಜೂರು ಮಾಡಿದರೆ ಈ ಜಿಲ್ಲೆಗಳಲ್ಲಿ ನೀರಿನ ಬವಣೆಯನ್ನು ಶಾಶ್ವತವಾಗಿ ಪರಿಹರಿಸಬಹುದು. ಏಕೆಂದರೆ ೪೪೦೦ ಮಿಮೀ ಮಳೆಯಾಗುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿದೆ ಎಂದರೆ ಇಷ್ಟು ವರ್ಷ ನಮ್ಮನಾಳಿದ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಈ ರಾಜಕಾರಣಿಗಳ ಬೇಜವಾಬ್ದಾರಿಯಿಂದ ಮಳೆಗಾಲದಲ್ಲಿಯೂ ನೀರಿಗಾಗಿ ಪರೆದಾಡುವ ಪರಿಸ್ಥಿತಿ ನಮ್ಮ ಬರಪೀಡಿತ ಜಿಲ್ಲೆಗಳಲ್ಲಿ ತಲೆದೋರಿದೆ. ಇದನ್ನು ಸಮಸ್ತ ಕನ್ನಡಿಗರೂ ಬಲ್ಲರು. ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು. ನನಗೆ ತಿಳಿದಿರುವ ಮಟ್ಟಿಗೆ ೮೫ ಲಕ್ಷ ಜನ ಸಂಖ್ಯೆಯಿರುವ ಬೆಂಗಳೂರಿಗೆ ದಿನವೊಂದಕ್ಕೆ ಬೇಕಾಗಿರುವ ನೀರಿನ ಪ್ರಮಾಣ ಕೇವಲ ೧೭೭ ಮಿಲಿಯನ್ ಗ್ಯಾಲನ್ ನೀರು. ೫೦೦ ಮಿ.ಗ್ಯಾಲನ್/ಪ್ರತಿ ದಿನಕ್ಕೆ ಬೇಕಾದರೂ ವರ್ಷಕ್ಕೆ ೩೧ ಟಿ.ಎಂ.ಸಿ.ಯಾಗುತ್ತದೆ? ೩೦೧೬ ಟಿ.ಎಂ.ಸಿ. ನೀರು ಸಮುದ್ರಕ್ಕೆ ಪಾಲಾಗುವುದನ್ನು ತಡೆದು ೬೦ ಟಿ‌ಎಂಸಿಯಷ್ಟು ಮಳೆ ನೀರನ್ನು ಶೇಖರಿಸಿದರೆ ಇಡಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ಶಾಶ್ವತ ನೀರಿನ ಪೂರೈಕೆ ಮಾಡಬಹುದು.

ವಿನಾಯಕ್ ಅವರು ತಿಳಿಸಿರುವಂತೆ ನಾನು ದೂರದ ಬ್ರಿಟನ್ನಿನಲ್ಲಿ ಕುಳಿತು ಈ ಯೋಜನೆಯ ಬಗ್ಗೆ ಮಾತನಾಡುತ್ತಿಲ್ಲ. ದೆಹಲಿಯಲ್ಲಿರುವ ಮಿತ್ರರು ಕರ್ನಾಟಕ್ಕೆ ಬರುವುದಕ್ಕಿಂತ ಹೆಚ್ಚು ಸಲ ಈ ಕೆಲಸಕ್ಕಾಗಿ ಭಾರತಕ್ಕೆ ಬರುತ್ತಿರುತ್ತೇನೆ. ನಾನು ಪ್ರತಿಬಾರಿ ಬಂದಾಗಲು ಇವರು ನನ್ನ ಜೊತೆ ಬಂದರೆ ನಾನು ಸುತ್ತಾಡಿರುವ ಹಳ್ಳಿಗಳ ನಿಜ ಪರಿಸ್ಥಿತಿಯನ್ನು ಕಾಣಬಹುದು. ಯಾರೇ ಆಗಲಿ ಸತ್ತ ವ್ಯಕ್ತಿಯಿಂದ ಕಣ್ಣನ್ನು ಪಡೆಯುತ್ತಾರೆಯೇ ವಿನಃ ಬದುಕಿರುವ ವ್ಯಕ್ತಿಯಿಂದ ಅಲ್ಲ. ಮುಂಗಾರು ಮಳೆ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೇತ್ರಾವತಿನದಿಯ ನೀರಿನಲ್ಲಿ ಕೇವಲ ಶೇ.೧೦ರಷ್ಟು ನೀರನ್ನಷ್ಟೇ ಬರಪೀಡಿತ ಪ್ರದೇಶಗಳು ಕೇಳುವುದು. ಈ ಯೋಜನೆ ಜಾರಿಯಾದರೆ ಬರಪೀಡಿತ ಜಿಲ್ಲೆಗಳು ಶಾಶ್ವತವಾಗಿ ಮರಭೂಮಿಯಾಗುವುದು ತಪ್ಪುತ್ತದೆ.
ಡಾ.ಮಧು ಸೀತಪ್ಪ

No comments:

Post a Comment