Friday, June 4, 2010

ಬರಪೀಡಿತ ಜಿಲ್ಲೆಗಳಿಗೆ ಬೇಕು ನೇತ್ರಾವತಿಯ ಬೈಪಾಸ್ ಸರ್ಜರಿ



೪೪೦೦ ಮಿ.ಮಿ. ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿರುವಾಗ ಸರಾಸರಿ ೬೭೪ ಮಿ.ಮೀ. ಮಳೆಯಾಗುವ ಬರಡು ಭೂಮಿಯಲ್ಲಿ ಮಳೆಗಾಲದಲ್ಲೂ ನೀರಿಗೆ ಪರದಾಡುವ ಪರಿಸ್ಥಿತಿ ಎಂದರೆ ಆಶ್ಚರ್ಯವಿಲ್ಲ. ಸರ್ಕಾರದ ಅಂಕಿ ಅಂಶಗಳ ಅನ್ವಯ ಬರಪೀಡಿತ ಜಿಲ್ಲೆಗಳಲ್ಲಿ ೪೮೬ರಿಂದ ೭೦೦ ಮಿ. ಮೀ. ಮಳೆಯಾಗುತ್ತದೆ. ಕನಿಷ್ಠ ೫೦ ಮಿ. ಮೀ. ಮಳೆ ರಭಸವಾಗಿ ಮೂರು ಗಂಟೆ ಕಾಲ ಸುರಿದರೆ ಕೆರೆಗಳಿಗೆ ನೀರು ಬರುತ್ತದೆ. ಈ ಜಿಲ್ಲೆಗಳಲ್ಲಿ ವಾರ್ಷಿಕ ೧೭ರಿಂದ ೪೫ ದಿನಗಳು ಮಳೆಯಾಗುತ್ತದೆ. ಎರಡು ಗಂಟೆಗೂ ಹೆಚ್ಚು ಮಳೆಯಾಗುವ ದಿನಗಳು ತೀರ ವಿರಳ. ಮಳೆಯಾದರೂ ಈ ಬಿಸಿಲುನಾಡಿನಲ್ಲಿ ನೀರು ಆವಿಯಾಗುವುದರಿಂದ, ಭೂಮಿಗೆ ಜಿನುಗುವುದರಿಂದ ಹಾಗು ಅಂತರ್ಜಲ ಇಂಗಿರುವುದರಿಂದ ಕೆರೆಗಳಲ್ಲಿ ನೀರು ಕೆಲವು ತಿಂಗಳುಗಳಿಗಿಂತ ಹೆಚ್ಚು ನಿಲ್ಲಲಾರದು. ಸತತವಾಗಿ ಹಾಗು ನಿರ್ದಿಷ್ಟ ಕಾಲದಲ್ಲಿ ಮಳೆಯಾಗದ ಕಾರಣ ಹಾಗು ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಜಿಲ್ಲೆಗಳಲ್ಲಿ ಒಟ್ಟು ೧೫,೪೪೨ ಕೆರೆಗಳಿವೆ. ೨೦೦೬ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ, ೨೦೦೭ರಲ್ಲಿ ಶೇ.೪೫ ಹಾಗೂ ೨೦೦೮ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ತೊಟ್ಟು ನೀರು ಸಹ ಬಂದಿಲ್ಲ. ಇಲ್ಲಿ ನಾನು ರಾಜಸ್ತಾನದ ಲಾಪೋಡಿಯ ಗ್ರಾಮವಾಗಲಿ ಅಥವಾ ಪಾಕಿಸ್ತಾನದ ಹೆಸರಿಲ್ಲದ ಪ್ರದೇಶದ ಬಗ್ಗೆಯಾಗಲಿ ಅಥವಾ ನಂದಿ ಬೆಟ್ಟದ ಸಣ್ಣ ಹಳ್ಳದ ಬಗ್ಗೆ ಬರೆಯುತ್ತಿಲ್ಲ. ೩ ಕೋಟಿ ಜನಸಂಖ್ಯೆಯ ಹಳೆ ಮೈಸೂರಿನ ೧೪ ಬರಪೀಡಿತ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗು ೩,೨೫೦೦೦ ಕೋಟಿ ಗೃಹ ಉತ್ಪನ್ನ ಮಾಡುವ ಬೆಂಗಳೂರು ನಗರದ ನೀರಿನ ಬವಣೆಯ ಬಗ್ಗೆ. ನಮ್ಮ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಅಸಮತೋಲನ ಆಗಿದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದುದರಿಂದಲೆ ೧೪ ಜಿಲ್ಲೆಗಳ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪರಮಶಿವಯ್ಯನವರ ಯೋಜನೆ ಈ ಅಸಮತೋಲನವನ್ನು ನಿವಾರಿಸುವಲ್ಲಿ ಉಪಯೋಗವಾಗಬಹುದು. ಈ ಯೋಜನೆ ೮೬ ತಾಲ್ಲೂಕುಗಳಲ್ಲದೆ ಬೆಂಗಳೂರು ನಗರಕ್ಕೂ ನೀರನ್ನು ತರಲಿದೆ.
ಹಳೆ ಮೈಸೂರಿನ ೧೪ ಜಿಲ್ಲೆಗಳ ಪೈಕಿ (ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡು) ೩೭.೧೪ ಲಕ್ಷ ಹೆಕ್ಟೇರುಗಳಷ್ಟು ಭೂಮಿ ಬಿತ್ತನೆಯಾಗುವ ಪ್ರದೇಶ, ಅದರಲ್ಲಿ ೭.೨೫ ಲಕ್ಷ ಹೆಕ್ಟೇರುಗಳಷ್ಟು ಅಂದರೆ ಶೇ.೧೯%ರಷ್ಟು ಭೂಮಿಗೆ ನೀರಾವರಿ ದೊರತಿದೆ. ಕಾವೇರಿಯಿಂದ ಒಟ್ಟು ೭,೬೯,೯೮೮ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿಯಾಗುತ್ತಿದೆ. ಕೆ.ಆರ್.ಎಸ್. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದ ವಿವಿಧ ಬೆಳೆಗಳಿಗೆ ೬೧.೨೦ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಈಗಾಗಲೆ ಉಪಯೋಗಿಸುತ್ತಿದ್ದರೆ ಅದನ್ನು ೩೮.೯೮ ಟಿ.ಎಂ.ಸಿ.ಗೆ ಇಳಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೨೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿಯಿಂದ ದೊರೆತಿದ್ದರೂ ಅದರಲ್ಲಿ ೭೦ಚಟಿ.ಎಂ.ಸಿ.ಯಷ್ಟು ನೀರು ಕಾವೇರಿ ಜಲಾಯನ ಪ್ರದೇಶದಲ್ಲಿ ಬರುವ ಕೆರೆಗಳ ಲೆಕ್ಕದಲ್ಲಿದೆ. ನೀರಾವರಿ ಇಲಾಖೆಯ ಅನ್ವಯ ಕೆರೆಗಳಿಂದ ಕೇವಲ ೧೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ನಮಗೆ ದೊರಕುತ್ತಿದೆ. ಇದಲ್ಲದೆ ತಮಿಳುನಾಡಿಗೆ ಕೇಂದ್ರ ಸರ್ಕಾರ ಬಿಳೆಗೊಂಡ್ಲುವಿನಲ್ಲಿ ಅಳವಡಿಸಿರುವ ಮಾಪನದ ಅನ್ವಯ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ಪ್ರತಿ ಸಾಲು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ (೧೯೦+೧೪೮). ಅಂದರೆ ತಮಿಳುನಾಡಿಗೆ ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೧೯೦ ಟಿ.ಎಂ.ಸಿ. ನೀರಲ್ಲದೆ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಈ ಹೆಚ್ಚುವರಿ ನೀರು ನ್ಯಾಯಯುತವಾಗಿ ಉತ್ಪತ್ತಿಯಾಗುವ ರಾಜ್ಯಕ್ಕೆ ಸೇರಬೇಕಾದದ್ದು. ಟ್ರಿಬ್ಯೂನಲ್ ವರದಿಯು ಸಹ ಹೆಚ್ಚುವರಿ ನೀರು ಯಾರಿಗೆ ಸೇರಬೇಕೆಂದು ಎಲ್ಲೂ ಹೇಳಿಲ್ಲ. ಆದರೆ ೨೦೦೫ರಲ್ಲಿ ಡಿ.ಎಂ.ಕೆ.ಯನ್ನು ಮೆಚ್ಚಿಸಲು ಯು.ಪಿ.ಎ. ಸರ್ಕಾರ ಹೆಚ್ಚುವರಿ ನೀರನ್ನು ಹೇಗೆ ಹಂಚಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಿದೆ. ಈ ವಿಚಾರವನ್ನು ಸರ್ವೋಚ್ಛ ನ್ಯಾಯಾಲಯ ಇನ್ನು ಕೈಗೆತ್ತಿಕೊಂಡಿಲ್ಲ. ತಮಿಳುನಾಡಿಗೆ ಈ ವಿವಾದ ನ್ಯಾಯಾಲಯದಲ್ಲಿ ಹೆಚ್ಚು ದಶಕಗಳು ಉಳಿದಷ್ಟು, ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಪ್ರತಿಸಾಲು ಹರಿದು ಹೋಗುತ್ತಿರುತ್ತದೆ. ಕಳೆದ ಮೂರು ದಶಕಗಳ ನಮ್ಮ ರಾಷ್ಟ್ರದ ರಾಜಕಾರಣ ಗಮನಿಸಿದರೆ ಯಾವುದೇ ಪಕ್ಷ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಬೇಕಾದರೆ ತಮಿಳುನಾಡಿನ ಪಕ್ಷಗಳ ಬೆಂಬಲ ಅತ್ಯಗತ್ಯ. ಅಂದರೆ ಕಾವೇರಿಯಿಂದ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳು ನೀರು ಪಡೆಯುವುದು ನನಸಾಗದ ಕನಸು.
ಕೃಷ್ಣಾ ನದಿಯಿಂದ ನಮ್ಮ ರಾಜ್ಯಕ್ಕೆ ೭೩೪ ಟಿ.ಎಂ.ಸಿ. ಸ್ಕೀಮ್ `ಎ'ನಿಂದ ಹಾಗೂ ೨೭೮ ಟಿ.ಎಂ.ಸಿ. ಸ್ಕೀಮ್ `ಬಿ'ನಿಂದ ಮಂಜೂರಾಗಿದೆ. ಅಂದರೆ ಒಟ್ಟು ೧೦೧೨ ಟಿ.ಎಂ.ಸಿ.ಯಷ್ಟು ನೀರು. ಇದರಲ್ಲಿ ತುಂಗಾಭದ್ರಾ ನದಿಯ ೪೫೦ ಟಿ.ಎಂ.ಸಿ.ಯಷ್ಟು ನೀರು ಸೇರಿದೆ. ಹಳೆ ಮೈಸೂರಿಗೆ ಸ್ಕೀಮ್ `ಎ'ನಿಂದ ೯೬ ಹಾಗೂ ಸ್ಕೀಮ್ `ಬಿ'ನಿಂದ ೨೨ ಟಿ.ಎಂ.ಸಿ.ಯಷ್ಟು ದೊರೆತಿದೆ. ನ್ಯಾಯಯುತವಾಗಿ ಹಳೆ ಮೈಸೂರಿನ ಪಾಲಿನ ತುಂಗಭದ್ರಾ ನದಿಯ ೪೫೦ರಲ್ಲಿ ಕನಿಷ್ಠ ೨೫೦ ಟಿ.ಎಂ.ಸಿ.ಯಷ್ಟಾದರೂ ನೀರು ಕೊಡಬೇಕಾಗಿತ್ತು. ೧೦೧೨ ಟಿ.ಎಂ.ಸಿ.ಯಲ್ಲಿ ಶೇ.೮೦ರಷ್ಟು ಹೈದರಾಬಾದ್ ಕರ್ನಾಟಕಕ್ಕೆ ನಮ್ಮ ಸರ್ಕಾರ ಕೊಟ್ಟರೆ, ಉಳಿದ ಶೇ.೧೦% (೧೦೦ ಟಿ.ಎಂ.ಸಿ) ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಇದಲ್ಲದೆ ತೆಲುಗು ಗಂಗಾ ಅಡಿಯಲ್ಲಿ ತಮಿಳುನಾಡಿನ ಚೆನ್ನೈಗೆ ಕೃಷ್ಣಾ ನದಿಯ ಕರ್ನಾಟಕದ ಪಾಲಿನಲ್ಲಿ ೫ ಟಿ.ಎಂ.ಸಿ. ನೀರು ಹೋಗುತ್ತಿದೆ. ಈಗಾಗಲೆ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶವು ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನಷ್ಟೇ ಬಲಿಷ್ಠವಾದದ್ದು ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಮ್ಮ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿದೆ. ಕಾಂಗ್ರೆಸ್, ಜೆ.ಡಿ.ಎಸ್ ಹಾಗು ಬಿ.ಜೆ.ಪಿ. ಪಕ್ಷಗಳು ಈ ಪ್ರಾಂತ್ಯದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅಂದರೆ ಬರಪೀಡಿತ ಹಳೆ ಮೈಸೂರು ಪ್ರಾಂತ್ಯದ ಎರಡನೆಯ ಕನಸು ಸಹ ಭಗ್ನವಾದಂತೆ.
ಹೇಮಾವತಿ ನದಿಯಿಂದ ಈಗಾಗಲೆ ೫೫ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಬಳಸುತ್ತದ್ದೇವೆ. ಇದು ಕಾವೇರಿಯ ಉಪನದಿಯಾಗಿರುವುದರಿಂದ ಕಾವೇರಿ ಟ್ರಿಬ್ಯೂನಲ್‌ನ ಭೂತಗನ್ನಡಿಯಡಿಯಲ್ಲಿ ಬರುತ್ತದೆ. ಟ್ರಿಬ್ಯೂನಲ್ ಕೇವಲ ೪೫ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಬಳಸಿ ಎಂದು ಆದೇಶಿಸಿದೆ. ಈಗಾಗಲೆ ಹೇಮಾವತಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಿಗೆ ನೀರುಣಿಸಲು ಸಾದ್ಯವಾಗುತ್ತಿಲ್ಲ. ಇರುವ ಒಂದೇ ಮಾರ್ಗವೆಂದರೆ ನೇತ್ರಾವತಿಯ ಬೃಹತ್ ಮಳೆ ಕೊಯ್ಲು ಯೋಜನೆ. ಆದುದರಿಂದಲೆ ನಾವು ಈ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮನ್ನು ನೀತಿಗೆಟ್ಟವರು ಎಂದು ಕೆಲವರು ಬಣ್ಣಿಸಿದರೆ, ಇನ್ನು ಕೆಲವರು ಪರಿಸರ ವಿರೋಧಿಗಳೆಂಬ ಪಟ್ಟ ಕಟ್ಟಿದ್ದಾರೆ. ಪರಮಶಿವಯ್ಯನವರ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಲ್ಲದೆ, ಬೆಂಗಳೂರು ನಗರಕ್ಕೂ ನೀರು ದೊರೆಯಲಿದೆ. ಶೇ.೯೦ರಷ್ಟು ಹೋಟೆಲ್ ಉದ್ಯಮದವರಲ್ಲದೆ ಸುಮಾರು ೮ ಲಕ್ಷ ಕರಾವಳಿಯ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದನ್ನು ಅನಗತ್ಯ ಹೇಳಿಕೆಗಳು ಕೊಡುವ ಮುಂಚೆ ಈ ನಾಯಕರು ಯೋಚನೆ ಮಾಡಬೇಕು. ನಾನು ಈ ಲೇಖನದಲ್ಲಿ ವಿವರಿಸಿರುವಂತೆ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯ ನಿವಾರಣೆಗೆ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಆಂಧ್ರ ಪ್ರದೇಶ (ಹೈದರಾಬಾದ್ ಕರ್ನಾಟಕ) ಹಾಗೂ ಕರಾವಳಿಯ ಪರಿಸರವಾದಿಗಳ ವಿರೋಧವಿದೆ. ಇದು ಹೇಗಿದೆಯೆಂದರೆ ಇತ್ತ ದರಿ, ಅತ್ತ ಪುಲಿ, ಹಿತ್ತಲಲ್ಲಿ ಮತ್ತೊಂದು ಪುಲಿಯೆಂಬಂತೆ.
ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾದ ಗುಂಡ್ಯ ಯೋಜನೆಯ ವಿರೋಧಿಸಿದ ಲೇಖನಗಳಲ್ಲಿ ಪ್ರಥಮ ಲೇಖನ ನನ್ನದಾಗಿತ್ತು. ಇದಲ್ಲದೆ ಚೀನಾ ದೇಶ ಅಣ್ವಸ್ತ್ರಗಳಿಂದ ಹಿಮಾಲಯ ಪರ್ವತದಲ್ಲಿ ರಂಧ್ರ ಕೊರೆದು ಬ್ರಹ್ಮಪುತ್ರ ನದಿಯನ್ನು ತಿರುಗಿಸುವ ವಿರೋಧವಾಗಿಯೂ ನಾನು ಲೇಖನ ಬರೆದಿದ್ದೆ. ಇದಲ್ಲದೆ ವಿಶ್ವೇಶ್ವರ ಭಟ್ಟರು ಚೀನಾದಿಂದ ಬಂದ ಮೇಲೆ ಬ್ರಹ್ಮಪುತ್ರ ನದಿಯ ಬಗ್ಗೆ ಏನಾದರೂ ಪ್ರಸ್ತಾಪವಾಯಿತೆ ಎಂದು ಸಹ ವಿಚಾರಿಸಿದ್ದೇನೆ. ಬೆಳೆಯುತ್ತಿರುವ ಜನಸಂಖ್ಯೆ, ಆಹಾರ ಹಾಗೂ ನೀರಿನ ಕೊರತೆ ಮತ್ತು ದೇಶದ ಆರ್ಥಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬರಪೀಡಿತ ಜಿಲ್ಲೆಗಳಂತೆ ನೀರಿನ ಬವಣೆಯನ್ನು ಎದುರಿಸುತ್ತಿರುವ ಉತ್ತರ ಚೀನಾದ ಹಳದಿ ನದಿ ಅಥವಾ ಯೆಲ್ಲೊ ರಿವರ್‌ಗೆ ದಕ್ಷಿಣದ ಯಾಂಗ್ಸೆ ನದಿಯಿಂದ ೨೦೦೦ ಕಿ.ಮೀ.ಗಳಿಗೂ ಹೆಚ್ಚು ದೂರಕ್ಕೆ ನೀರನ್ನು ಪಂಪ್ ಮಾಡಲಾಗುತ್ತಿದೆ. ಇದಲ್ಲದೆ ಏಷ್ಯಾ ಖಂಡದ ಬಹುತೇಕ ನದಿಗಳು ಉಗಮವಾಗುವ ಟಿಬೆಟಿಯನ್ ಪ್ಲಾಟೊನಿಂದ ಚೀನಾಕ್ಕೆ ಬಯಾಂಕ ಪರ್ವತಗಳಲ್ಲಿ ಅಣ್ವಸ್ತ್ರಗಳಿಂದ ಕಾಲುವೆಗಳನ್ನು ಮಾಡಿ ನೀರನ್ನು ಕೊಂಡೊಯ್ಯಲು ಚೀನಾ ಕಾಮಗಾರಿಯನ್ನು ಪ್ರಾರಂಭಿಸಿದೆ. ಇಷ್ಟಲ್ಲದೆ ಆಫ್ರಿಕಾ ಖಂಡದ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಚೀನಾ ಅಲ್ಲದೆ ಭಾರತದ ಕಂಪನಿಗಳು ಕಡಿಮೆ ದರದಲ್ಲಿ ಆಹಾರ ಉತ್ಪಾದನೆಗೆ ಲಕ್ಷಾಂತರ ಹೆಕ್ಟೇರುಗಳಷ್ಟು ಜಮೀನನ್ನು ಖರೀದಿಸಿವೆ. ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ನಮ್ಮ ರಾಷ್ಟ್ರದಲ್ಲಿ ಸಮುದ್ರ ಪಾಲಾಗುತ್ತಿದೆ. ಶೇ.೯೦ರಷ್ಟು ಮಂದಿ ನಮ್ಮ ರಾಷ್ಟ್ರದಲ್ಲಿ ವ್ಯವಸಾಯವನ್ನು ಅವಲಂಬಿಸಿದ್ದರೂ ವ್ಯವಸಾಯಕ್ಕೆ ಬೇಕಿರುವ ನೀರನ್ನೊದಗಿಸದೆ ರಾಷ್ಟ್ರಕ್ಕೆ ಅಗತ್ಯವಿರುವ ಧವಸದಾನ್ಯಗಳನ್ನು ಬೆಳೆಯಲಿಕ್ಕಾಗದೆ, ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಅಮದು ಮಾಡಿಕೊಳ್ಳುವ ಪರಿಸ್ಥಿತಿ ಭಾರತ ಎದುರಿಸುತ್ತಿದೆ. ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಕ್ರೆಡಿಟ್ ಜಾರಿಗೆ ಬರಲಿದೆ. ಅಂದರೆ ಪ್ರತಿ ದೇಶದಲ್ಲಿ ವಾಹನ ಹಾಗೂ ಕೈಗಾರಿಕೆಗಳಿಂದ ಭೂಮಿಗೆ ಉಗುಳುವ ಇಂಗಾಲವನ್ನು ಹೀರಲು ಮರಗಳನ್ನು ಬೆಳೆಸಬೇಕಾಗುತ್ತದೆ. ಅರ್ಥಿಕತೆ, ಆಹಾರ, ಕಾರ್ಬನ್ ಕ್ರೆಡಿಟ್, ಕೈಗಾರಿಕೆ, ವ್ಯವಸಾಯ ಹಾಗೂ ಮುಖ್ಯವಾಗಿ ಕುಡಿಯುವುದಕ್ಕೆ ನೀರು ಅತ್ಯವಶ್ಯಕ.
ಅಂಕಿ ಅಂಶಗಳ ಪ್ರಕಾರ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ೧೯೯೭ರಲ್ಲಿ ೨೪ ಮೀಟರ್ ಇದ್ದದ್ದು ೨೦೦೪ರಲ್ಲಿ ೪೧ ಮೀಟರುಗಳಿಗೆ ಕುಸಿದಿದೆ. ೫೭ ತಾಲ್ಲುಕುಗಳಲ್ಲಿ ಅಂರ್ತಜಲ ಸಂದಿಗ್ಧ ಮಟ್ಟಕ್ಕೆ ತಲುಪಿದೆ. ೧೪,೨೫೭ ವಸತಿ ಪ್ರದೇಶದಲ್ಲಿ ಫ್ಲೋರೈಡ್ ಹಾಗು ನೈಟ್ರೇಟ್ ಲವಣಗಳು ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ. ೩೧.೨೦ ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳು ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿದೆ. ವ್ಯವಸಾಯವಿರಲಿ ಕುಡಿಯಲು ಶುದ್ದ ನೀರಿಲ್ಲದೆ ತವಕಿಸುತ್ತಿವೆ. ಈ ಬರಪೀಡಿತ ಜಿಲ್ಲೆಗಳಿಗೆ ನೀರು ಬರುವ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಈ ಪ್ರದೇಶಕ್ಕೆ ನೀರಿನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಂದ ಅನ್ಯಾಯವಾಗಿದೆ. ಹೃದಯದಲ್ಲಿ ಹೇಗೆ ಟ್ರಿಪಲ್ ವೆಸೆಲ್ ಬ್ಲಾಕ್ ಆದಾಗ ಬೈಪಾಸ್ ಸರ್ಜರಿ ಅಗತ್ಯವೊ ಹಾಗೆ ಬರಪೀಡಿತ ಜಿಲ್ಲೆಗಳು ಸಾಯದೆ ಉಳಿಯ ಬೇಕಾದರೆ ಇರುವ ಒಂದೆ ಮಾರ್ಗ ಯಾವುದಾದರು ನದಿಯ ಬೈಪಾಸ್ ಸರ್ಜರಿ. ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗಬೇಕಾದರೆ, ಕೆರೆಗಳಲ್ಲಿ ೩೬೫ ದಿನ ಕನಿಷ್ಠ ೩ ಮೀಟರುಗಳಷ್ಟು ನೀರು ಸತತವಾಗಿ ೨೫ಕ್ಕೂ ಹೆಚ್ಚು ವರ್ಷಗಳು ನಿಲ್ಲಬೇಕು. ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರುವು ಮಾಡಿ ಶೇ.೮%ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.೩೦ಕ್ಕೆ ಏರಿಸಬೇಕು. ಇದನ್ನು ಕೇವಲ ನೀರಿನ ಶೇಖರಣೆ, ಮಳೆ ಕೊಯ್ಲು, ಮಿತವಾದ ನೀರಿನ ಬಳಕೆ ಅಥವಾ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಮಾಡಲು ಸಾದ್ಯವಿಲ್ಲ. ಇವೆಲ್ಲವೂ ಹೃದ್ರೋಗಿ ಕೊಲೆಸ್ಟ್ರಾಲ್ ತಗ್ಗಿಸುವುದು, ಧೂಮಪಾನ ಬಿಡುವುದು ಹಾಗೂ ದೇಹದ ತೂಕವನ್ನು ಕರಗಿಸುವ ವಿಧಾನಗಳಂತೆ. ಯಾವುದಾದರೂ ನದಿಯಿಂದ ಬೈಪಾಸ್ ಸರ್ಜರಿ ಅತ್ಯಗತ್ಯ ಇರುವಂತೆ ೧೫,೪೪೨ ಕೆರೆಗಳಿಗೆ ಆಂಜಿಯೊ ಪ್ಲಾಸ್ಟಿಯೂ ಅಗತ್ಯವಿದೆ. ಕೆರೆಗಳ ಅಬಿವೃದ್ಧಿ ಪ್ರಾಧಿಕಾರ ರಚಿಸಿ ಕೆರೆಗಳ ಜೀರ್ಣೋದ್ದಾರ ಕಾರ್ಯವು ಪ್ರಾರಂಭವಾಗಬೇಕು. ಯಾವ ನದಿಯಿಂದ ಡಾ.ಯಡಿಯೂರಪ್ಪನವರು ಬೈಪಾಸ್ ಮಾಡುತ್ತಾರೊ ಇದು ಅವರ ವಿವೇಚನೆಗೆ ಬಿಟ್ಟದ್ದು. ನನಗೆ ಕಂಡುಬರುವಂತೆ ನೇತ್ರಾವತಿ ನದಿಯಲ್ಲದೆ ಬೇರೆ ಮಾರ್ಗ ಅವರಿಗಿಲ್ಲ. ಬರಪೀಡಿತ ಜಿಲ್ಲೆಯ ಜನ ಮೊಸಳೆ ಕಣ್ಣೀರಿನ ಜಾಣ ಉಪಾಯಗಳನ್ನು ರಾಜಕಾರಣಿಗಳು ಹಾಗು ಪರಿಸರವಾದದ ಸೋಗಿನಲ್ಲಿರುವ ಬುದ್ಧಿಜೀವಿಗಳಿಂದ ಪದೇ ಪದೇ ಕೇಳಿ ಬೇಸತ್ತಿದ್ದಾರೆ. ಬಣ್ಣದ ಕನಸೊ, ನನಸಾಗದ ಕನಸೊ ಆದರೆ ನೇತ್ರಾವತಿಯ ತಿರುವೇ ಶಿವ ಶಿವ ಎನ್ನುವವರ ದುಃಸ್ವಪ್ನ ಬರಪೀಡಿತ ಜನರಿಗೆ ಬೀಳದಿರಲಿ ಎಂದು ಆಶಿಸುತ್ತೇನೆ.
ಡಾ.ಮಧು ಸೀತಪ್ಪ

No comments:

Post a Comment